Sunday 24 June 2007

ಸಿನೆಮಾ: ಹಿಂದಿ: ಯಾತ್ರಾ


ಗೌತಮ್ ಘೋಷ್, ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬ. ಶ್ಯಾಮ್ ಬೆನಗಲ್, ಗೋವಿಂದ್ ನಿಹಲಾನಿಯವರಿಗಿಂತ ಸಂಕೀರ್ಣವಾದ ವಸ್ತುಗಳನ್ನು ಕ್ಯಾಮರಾದಲ್ಲಿ ಕತೆಯಾಗಿಸಿದವರು. 'ಮಾ ಭೂಮಿ' ಎಂಬ ತೆಲುಗು ಚಿತ್ರದಿಂದ ತಮ್ಮ ನಿರ್ದೇಶನವನ್ನು ಆರಂಭಿಸಿದ ಘೋಷ್, ೨೭ ವರ್ಷಗಳಲ್ಲಿ ನಿರ್ದೇಶಿಸಿದ್ದು ಕೇವಲ ೭ ಚಿತ್ರಗಳು. ಯಾತ್ರಾ - ಅವರ ಏಳನೇ ಚಿತ್ರ. ನಾನಾ ಪಾಟೆಕರ್, ದೀಪ್ತಿ, ರೇಖಾ ಅಭಿನಯದ ಚಿತ್ರ.

ದಶರಥ ಜೋಗಳೇಕರ್, ಒಬ್ಬ ಖ್ಯಾತ ಬರಹಗಾರ, ಕಾದಂಬರಿಕಾರ. ಆತನಿಗೆ ಅವಾರ್ಡುಕೊಟ್ಟು ಸತ್ಕರಿಸಲು ಆತನಿಗೆ ದಿಲ್ಲಿಗೆ ಆಮಂತ್ರಣ. ಪ್ರಥಮ ಬಾರಿಗೆ ಅಂಥ ಕಾರ್ಯಕ್ರಮವನ್ನು ಒಂದು ದೊಡ್ಡ ಕಂಪನಿ ಪ್ರಾಯೋಜಿಸಿರುತ್ತೆ. ಕಾದಂಬರಿಕಾರನನ್ನು ಎಸ್ಕಾರ್ಟು ಮಾಡಲು ಒಂದು ಯುವತಿ ಬೇರೆ. ಬರಹಗಾರನ ಮನೆಯವರೆಲ್ಲ (ಹೆಂಡತಿ, ತಾಯಿ, ವಯಸ್ಸಿಗೆ ಬಂದ ಇಬ್ಬರು ಮಕ್ಕಳು) ಸಿಕ್ಕಾಪಟ್ಟೆ ರಿಯಾಯತಿಯಲ್ಲಿ ಮಾರುವ ಸುಪರ್ ಮಾಲ್ ಒಂದಕ್ಕೆ ಹೋಗಿರುತ್ತಾರೆ. ಅದನ್ನೇ ತಲೆಯಲ್ಲಿ ತುಂಬಿಕೊಂಡು 'ಬಾಜಾರ್' ಎನ್ನುವ ಕಾದಂಬರಿಯೊಂದಕ್ಕೆ ಸಿದ್ಧತೆ ಶುರುವಿಟ್ಟುಕೊಂಡು ದಿಲ್ಲಿಗೆ ಹೊರಡುತ್ತಾನೆ.

ರೈಲಿನಲ್ಲಿ ಆತನಿಗೆ ಇವನ ದೊಡ್ಡ ಅಭಿಮಾನಿ ಯುವನಿರ್ದೇಶಕ ಜೊತೆಯಾಗುತ್ತಾನೆ. ಇಬ್ಬರೂ ಆತನ ಪ್ರಸಿದ್ಧ ಕೃತಿ ಜನಾಝಾವನ್ನು ಮೆಲುಕು ಹಾಕುತ್ತಾರೆ. 'ಬರಹಗಾರ' ಕತೆ 'ಹೇಳಲು' ಆರಂಭಿಸುತ್ತಾನೆ, ಆದ್ದರಿಂದ fact ಯಾವುದು, fiction ಯಾವುದು ಗೊತ್ತಾಗದೇ, fact and fiction ನಡುವಿನ ಎಳೆ ಎಲ್ಲೋ ಕಳಚಿಕೊಂಡು ಬಿಡುತ್ತದೆ. ಯುವನಿರ್ದೇಶಕ ಕಾದಂಬರಿಕಾರ ಹೇಳುತ್ತಿರುವುದನ್ನು ಸಿನಿಮಾಟಿಕ್ ಆಗಿ ಗ್ರಹಿಸುತ್ತಿದ್ದಾನೆ. ಸೃಜನಶೀಲತೆಯ ಯಾತ್ರೆಯಿದು: between fact and fiction, ಕತೆ ಬರೆಯುವುದು ಮತ್ತು ಹೇಳುವುದು, ಕಾದಂಬರಿ ಮತ್ತು ಸಿನಿಮಾ...ಈ ಸಂಕೀರ್ಣತೆಯನ್ನು ನಾನು ಶಬ್ದದಲ್ಲಿ ಹಿಡಿಯಲು ಸಾಧ್ಯವೇ ಇಲ್ಲ, ಚಿತ್ರ ನೋಡಿಯೇ ಅನುಭವಿಸಬೇಕು. ಕಾದಂಬರಿಕಾರ ಹೇಳುತ್ತಾನೆ: ಈ ಕಾದಂಬರಿಯನ್ನು ಮತ್ತೊಮ್ಮೆ ಬರೆಯಬೇಕು.

ಕಾದಂಬರಿಕಾರ ಪ್ರಶಸ್ತಿ ಸ್ವೀಕರಿಸಿ ಹೊಟೀಲ್ ರೂಮಿಗೆ ಬಂದಾಗ ತಲೆತುಂಬ 'ಬಾಜಾರ್' ನ ಸಾಮಗ್ರಿಗಳು: ಡಿಸ್ಕೌಂಟಿನಲ್ಲಿ ಪ್ರೀತಿ-ಪ್ರೇಮಗಳನ್ನು ಮಾರಾಟಕ್ಕಿಟ್ಟಂತೆ, ಪ್ರಿಯಕರನ ಜೊತೆಗಿನ ಪ್ರಣಯ ಇಂಟರ್ನೆಟ್ಟಿನಲ್ಲಿ ಮಾರಾಟಕ್ಕಿಟ್ಟಂತೆ, ಹಿಂದು-ಮುಸ್ಲೀಮ್ ಗಲಭೆಯಲ್ಲಿ ಪೆಟ್ಟು ತಿಂದಿರುವ ಯುವಕನ ಹತಾಶೆ ಟಿವಿ anchor ಮುಂದೆ ಮಾರಾಟಕ್ಕಿಟ್ಟಂತೆ, ಇತ್ಯಾದಿಗಳನ್ನು ತುಂಬಿಕೊಂಡು ಕಾದಂಬರಿ ಬರೆಯಲು ಆರಂಭಿಸುತ್ತಾನೆ.

ಕಾದಂಬರಿಕಾರ ಜನಾಝಾ ಕಾದಂಬರಿಯ ಸ್ಫೂರ್ತಿಯಾದ ನಾಚ್ ವಾಲಿಯನ್ನು ನೋಡಲು ಹೈದರಾಬಾದಿಗೆ ಬರುತ್ತಾನೆ. ಆತ ನಾಪತ್ತೆಯಾಗಿರುವ ಸುದ್ದಿ ಹರಡಲು ಬಹಳ ಹೊತ್ತೇನೂ ಹಿಡಿಯುವುದಿಲ್ಲ. ಕಾದಂಬರಿಕಾರ ನಾಚ್ ವಾಲಿಯ ತೋಲಿನಲ್ಲಿ ಸಾಯುತ್ತಾನೆ. ಆಕೆ ಆತನ ಹೆಸರು ಕೆಡದಿರಲಿ ಎಂದು ಹೆಣವನ್ನು ಸಾಗಹಾಕುತ್ತಾಳೆ. ಅದೇ ವೇಳೆಗೆ ಕಾದಂಬರಿಕಾರನ ಹೆಂಡತಿ ನಾಚ್ ವಾಲಿಯ ಹತ್ತಿರ ಗಂಡನನ್ನು ಹುಡುಕಿಕೊಂಡು ಬರುತ್ತಾಳೆ. Fact meets the fiction. 'ಬಾಜಾರ್' ನ ಹಾಳೆಗಳು ಹಾರಾಡುತ್ತವೆ.

ಸೃಜನಶೀಲ ಬರಹಗಾರನ ತೊಳಲಾಟಗಳನ್ನು ತುಂಬ ಸಮರ್ಥವಾಗಿ ಚಿತ್ರಿಸಿದ್ದಾರೆ, ಘೋಷ್. ಹಾಗೆಂದು, ಚಿತ್ರದಲ್ಲಿ ದೋಷಗಳೇ ಇಲ್ಲವೆಂದಲ್ಲ. ' ಗಾಂಧಿಯನ್ನು ಗೋಡ್ಸೆ ಒಮ್ಮೆ ಕೊಂದ, ನಾವು ದಿನವೂ ಕೊಲ್ಲುತ್ತಿದ್ದೇವೆ' ಎಂದು ಕ್ಲಿಷೆಯ ಮಾತುಗಳು ಸುಮಾರಿವೆ. ಚಿತ್ರದ ಸಣ್ಣ ಪುಟ್ಟ ಕೊರತೆಗಳನ್ನು ಮರೆತುಬಿಡಿ, ತುಂಬಾ ದಿನಗಳ ನಂತರ ಒಳ್ಳೆಯ ಚಿತ್ರ ನೋಡಿ ಮೆಲುಕು ಹಾಕುತ್ತಿದ್ದೇನೆ, ನೀವೂ ನೋಡಿ.

ಅಂದಹಾಗೆ, ಹಿಂದುಸ್ತಾನಿ ಸಂಗೀತಪ್ರಿಯರಿಗೆ ಈ ಚಿತ್ರದ ಹಾಡುಗಳು ಹುಚ್ಚು ಹಿಡಿಸುವಲ್ಲಿ ಸಂಶಯವೇ ಇಲ್ಲ.

ಈ ಸಿನೆಮಾವನ್ನು ನೋಡಲು ಇಲ್ಲಿ ಒತ್ತಿ.

Saturday 16 June 2007

ಪುಸ್ತಕ: ಗುರುಪ್ರಸಾದ ಕಾಗಿನೆಲೆ: ಶಕುಂತಳಾ


`ಶಕುಂತಳಾ` ಕಥಾಸಂಕಲನ ನನ್ನನ್ನು ಸೆಳೆದದ್ದು ಅದು ಉಪಯೋಗಿಸಿದ ಭಾಷೆಯಿಂದ; ಇಷ್ಟು ದಿನ ನನ್ನನ್ನು ಕಾಡಿದ ಭಾಷಾಸಮಸ್ಯೆಯನ್ನು, ಅದು ಸಮಸ್ಯೆಯೇ ಅಲ್ಲ ಎನ್ನುವಂತೆ ಬರೆದ ಧಾಟಿಯಿಂದ; ಕನ್ನಡಕೊಂದು ಹೊಸ ಎನರ್ಜಿ ತಂದ ಬಗೆಯಿಂದ; ಅಪರಿಚಿತ ಸಂಸ್ಕೃತಿಯಲ್ಲಿ ಬದುಕುತ್ತಿರುವ ಅನಿವಾಸಿ ಭಾರತೀಯರಿಗೆ ಎದುರಾಗುವ ಘಟನೆಗಳನ್ನು ಕನ್ನಡಕ್ಕೆ ಅಳವಡಿಸಿದ ರೀತಿಯಿಂದ; ಸುಮ್ಮಸುಮ್ಮನೇ ಕಷ್ಟದ ಕನ್ನಡ ಸಮಾನಾರ್ಥಕ ಪದಗಳನ್ನು ಉಪಯೋಗಿಸದೇ ಇಂಗ್ಲೀಷನ್ನೇ ಕನ್ನಡ ಪದಗಳನ್ನಾಗಿಸಿದ ಸಹಜತೆಯಿಂದ. ನಾನೂ ಅವರಂತೆ ಪಾಶ್ಚಾತ್ಯ ದೇಶದ ವೈದ್ಯಕೀಯ ಕ್ಷೇತ್ರದಲ್ಲೇ ಇರುವುದರಿಂದ ಈ ಕತೆಗಳು ನನಗೆ ಇನ್ನೂ ಆಪ್ತವಾಗಿವೆ.

ಅಲಬಾಮಾದ ಅಪಾನವಾಯು ಸೆಳೆಯುವುದು ಅದರ ನವಿರಾದ ತಿಳಿ ಹಾಸ್ಯದ ಹೊಸ ಭಾಷೆಯಿಂದ. ಪಾಶ್ಚಾತ್ಯ ದೇಶಗಳ ಕಾರ್ಯವೈಖರಿಯನ್ನು ನವಿರಾಗಿ ಲೇವಡಿಮಾಡುತ್ತಾ ಅಂತ್ಯದಲ್ಲಿ ಫಾರಿನ್ ರಿಟರ್ನ್ಡ್ ಡಾಕ್ಟರನ್ನೂ ಐರನಿಯಲ್ಲಿ ಕೂರಿಸುತ್ತಾರೆ. ಮೇಲುಪದರಿನಲ್ಲಿ ಹಾಸ್ಯವೇ ಈ ಕತೆಯ ಜೀವವಾಗಿದ್ದರೂ, ಒಳಗಿಳಿದಂತೆ ಪೇಪರ್ ವರ್ಕ್, ಮೀಟಿಂಗಳು, ಮಾತು ಮಾತಿಗೆ ಗೈಡ್ ಲೈನ್ಸ್, ರಿಸ್ಕ್ ಮ್ಯಾನೇಜ್ಮೆಂಟ್ ಅನ್ನುತ್ತಾ ಚಿಕ್ಕ ಪುಟ್ಟ ಅನಾಹುತಕಾರಿಯಲ್ಲದ ಘಟನೆಗಳನ್ನು ದೊಡ್ದದನ್ನಗಿಸಿ ಹಾಸ್ಯಪ್ರಜ್ನೆ ಕಳೆದುಕೊಂಡಿರುವ ಇಲ್ಲವನ್ನೂ ದುಡ್ದಿನಲ್ಲಿ ಅಳೆಯುವ ಪಾಶ್ಚಾತ್ಯರ ಕ್ಯಾಪಿಟಲಿಸಂನ್ನು ಗೇಲಿಮಾಡಿದ್ದಾರೆ.

ಬೀಜ, ಒಂಥರ ಐರನಿಕಲ್ ಹಾಸ್ಯದ ಕತೆ. ಮೆಡಿಕಲ್ ಬ್ಯಾಕ್ರೌಂಡ್ ಇಲ್ಲದವರಿಗೆ ಕೆಲ ಶಬ್ದಗಳು ಅರ್ಥವಾಗದಿದ್ದರೂ ಕತೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವೇನೂ ಆಗುವುದಿಲ್ಲ. ಪಾಶ್ಚಾತ್ಯದೇಶಗಳಲ್ಲಿ ಬೆಳೆದ ಭಾರತೀಯ ಮಕ್ಕಳ ಮನೋಭಾವವನ್ನು ಯಾವ ಭಾವಾತಿರೇಕವಿಲ್ಲದೇ ರಿಯಲಿಸ್ಟಿಕ್ ಆಗಿ ಚಿತ್ರಿಸಿದ್ದಾರೆ, ಅದರಿಂದಾಗಿ ಪಿತೃಗಳಿಗಾಗುವ ಪೀಕಲಾಟವನ್ನೂ ಅಷ್ಟೇ ಸಂಯಮದಿಂದ ಚಿತ್ರಿಸಿದ್ದಾರೆ. ಈ ಕತೆಯಲ್ಲಿ ಅಂಡರ್ ಕರೆಂಟಾಗಿ ಹರಿಯುವುದು ಸೆಕ್ಸ್ ಅಂತ ನನ್ನ ಅನಿಸಿಕೆ: ಬೀಜದ ಕ್ಯಾನ್ಸರ್, ಟಿನೇಜ್ ಮಗನಿಗೆ ಸ್ಖಲನದ ಬಗ್ಗೆ ಮಾತಾಡುವ ಭಾರತೀಯ ಪಿತೃಗಳ ಗೊಂದಲ, ಹುಡುಗನಿಗೆ ಯಾವ ಹಿರೋಯಿನ್ ಇಷ್ಟವಿಲ್ಲದೇ ಶಾರೂಖ್ ನನ್ನು ಪ್ರಾಣಹೋಗುವಷ್ಟು ಇಷ್ಟಪಡುವುದು, ಶಾರೂಖ್ ಗೆ ಇರಬಹುದೇ ಎಂದು ಸಂಶಯ ಪಡುವುದು...ಒಂದಕ್ಕೊಂದು ಕೊಂಡಿಯಂತೆ ಸಾಗುತ್ತದೆ.

ಡ್ಯಾಡಿ, ಇನ್ನೊಂದು ನವಿರು ಹಾಸ್ಯದ ಕತೆ. ಪಾಶ್ಚಾತ್ಯ ಬದುಕಿನಲ್ಲಿ ಏಗುವ ತಂದೆಯ ಬದುಕನ್ನು ವ್ಯಂಗ್ಯವಿಲ್ಲದೇ, ಲೇವಡಿ ಮಾಡದೇ ಸೊಗಸಾಗಿ ಬರೆದಿದ್ದಾರೆ. ಇದೇ ಹಾಸ್ಯದ ಇನ್ನೊಂದು ಸೊಗಸಾದ ಕತೆ, ಮೊದಲ ತೇದಿ. ಕನ್ನಡ-ಕಥೆಯ ಶ್ರೀರಾಂ ಈ ಕತೆಯನ್ನು ತುಂಬ ಚೆನ್ನಾಗಿ ವಿಶ್ಲೇಸಿಸಿದ್ದಾರೆ.
ನನಗೆ ಇನ್ನೊಂದು ಇಷ್ಟವಾದ ಕತೆ, ವಿಲ್ಲಾ ವೈದ್ಯ. ಮತ್ತು ಅದರ ಜೊತೆಜೊತೆಗೇ ನಡೆದಿರಬಹುದಾದ ಕತೆ, ಸುಮ್ಮನೆ.

ದೆಜಾ ವೂ, ಗಾಳಿಪಟ, ಶಕುಂತಳಾ, ಸಿರಿಸಂಜೆ - ಈ ಕತೆಗಳು ಬಹುಷಃ ವಿಮರ್ಶಕರನ್ನು ಮೆಚ್ಚಿಸಲು ಅಥವಾ ಕಥಾ ಸ್ಪರ್ದೆಯಲ್ಲಿ ಗೆಲ್ಲಲು ಅಥವಾ ಗಂಭೀರ ಸಾಹಿತ್ಯ ಸೃಷ್ಟಿಸಲು ತಿಣುಕಾಡಿ ಬರೆದಂಥವುಗಳು. ಆದರೆ ಈ ಕತೆಗಳಿಗಿಂತ, ಸರಳ ಭಾಷೆಯಲ್ಲಿ ಸುಲಲಿತವಾಗಿ ಎಲ್ಲರಿಗೆ ತಿಳಿಯುವಂತೆ ಬರೆದ ಉಳಿದ ಕತೆಗಳೇ ಹೆಚ್ಚು ಅರ್ಥವನ್ನು ಹೊಮ್ಮಿಸುತ್ತವೆ.

ಈ ಪುಸ್ತಕವನ್ನು ಇಲ್ಲಿ ಕೊಳ್ಳಬಹುದು