ಬದುಕಿಗಿಂತ ಕಠಿಣ ಶಿಕ್ಷೆಯೇ ಇಲ್ಲ
ಇನ್ನಾವ ಅಪರಾಧವೂ ಉಳಿಯಲೇ ಇಲ್ಲ
ಚೂರುಚೂರಾಗಿ ಹಂಚಿ ಹೋಗಿರುವೆನು
ನನ್ನ ಪಾಲಿಗೆ ಒಂಚೂರೂ ಇರಲೇ ಇಲ್ಲ
ಜೀವವೇ, ಮರಣವೇ ನಿನ್ನ ಗುರಿ
ಬೇರೆ ಯಾವ ದಾರಿಯೂ ಕಾಣಲೇ ಇಲ್ಲ
ಚೂರು ಹೆಚ್ಚು ಕಡಿಮೆಯಾದರದು ಸತ್ಯವೇ ಅಲ್ಲ
ಸುಳ್ಳಿಗೆ ಮಿತಿಯೆಂಬುದು ಅಳಿಯಲೇ ಇಲ್ಲ
ಜೀವವೇ, ಈಗ ಹೇಳು, ಎಲ್ಲಿಗೆ ಹೋಗೋಣ
ಸಂತೆಯಲ್ಲಿ ವಿಷ ಕೂಡ ಸಿಗಲೇ ಇಲ್ಲ
ಎಂಥ ಅವತಾರ, ಎಂಥ ಪೈಗಂಬರ
ಅನಿಸುತಿದೆ ಈಗ ದೇವರೇ ಇರಲೇ ಇಲ್ಲ
ಚಿನ್ನದ ಚೌಕಟ್ಟನು ಹಾಕಿದರೆ ಏನು
ಕನ್ನಡಿಗೆ ಸುಳ್ಳು ಹೇಳಲು ಬರಲೇ ಇಲ್ಲ
ತನ್ನ ಪದಗಳೊಳಗೆ ತಾನು ಜೀವಂತ
‘ನೂರ್’ ಈ ಲೋಕದಿಂದ ಹೋಗಲೇ ಇಲ್ಲ
(ಕೃಷ್ಣ ಬಿಹಾರಿ ನೂರ್ ಅವರ ज़िंदगी से बड़ी सज़ा ही नहीं ಗಜಲಿನ ಕನ್ನಡ ಭಾವಾನುವಾದ)