ರಾಜಕುಮಾರ. ರಾತ್ರಿ ಮಲಗಿದಾಗ ಆತನ ಕೋಣೆಯಲ್ಲಿರುವ ದೀಪದ ಮೊಲ್ಲೆಯ ವಿಗ್ರಹಕ್ಕೆ ಜೀವ ಬಂದು ಅಕ್ಷರಷಃ ರಾಜಕುಮಾರನ ಒಳಗೆ ಸೇರಿಕೊಳ್ಳುತ್ತಾಳೆ. ಎಚ್ಚರವಾದಾಗ ರಾಜಕುಮಾರನಿಗೆ ದೀಪದ ಮೊಲ್ಲೆಯನ್ನಲ್ಲದೇ ಯಾವ ಹುಡುಗಿಯ ಮೇಲೆ ಅತೀವ ಮೋಹ ಹುಟ್ಟುತ್ತದೆ, ಆತ ಅನ್ನಾವ ಹುಡುಗಿಯನ್ನೂ ಕಣ್ಣೆತ್ತಿಯೂ ನೋಡಲಾರ. ಆತನ ತಾಯಿ ಯಾರ್ಯಾರಿಗೋ ಕೇಳಿದ ಮೇಲೆ ರಾಜಕುಮಾರನನ್ನೇ ತುಂಡರಿಸಿ ಎರಡು ಭಾಗ ಮಾಡಿ ಎರಡು ಮಡಿಕೆಗಳಲ್ಲಿ ಹೂತು ಹಾಕುತ್ತಾರೆ. ಒಂದರಿಂದ ರಾಜಕುಮಾರ ಬರುತ್ತಾನೆ. ಇನ್ನೊಂದರಿಂದ ದೀಪದ ಮೊಲ್ಲೆ ಹೊರಬರುತ್ತಾಳೆ ಎಂದು ನಂಬಿಕೊಂಡು. ಒಂದು ಮಡಿಕೆಯಿಂದ ರಾಜಕುಮಾರನೇನೋ ಹೊರಬರುತ್ತಾನೆ, ಆದರೆ ಇನ್ನೊಂದು ಮಡಕೆಯಿಂದ ದೀಪದ ಮೊಲ್ಲೆಯ ಬದಲಿಗೆ ಕಾಳಿಂಗ (ಸರ್ಪ) ಹೊರಬರುತ್ತಾನೆ. ಜನ ಕಾಳಿಂಗನನ್ನು ಹೊಡೆಯಲು ಹೊರಡುತ್ತಾರೆ, ಕಾಳಿಂಗ ತಪ್ಪಿಸಿಕೊಂಡು ಕಾಡು ಸೇರುತ್ತಾನೆ. ರಾಜಕುಮಾರ ವಿಧಿಯಿಲ್ಲದೇ ತಾಯಿ ಹೇಳಿದ ಹುಡುಗಿಗೆ ತಾಳಿ ಕಟ್ಟಿ, ಊರೂರು ಸುತ್ತತೊಡಗುತ್ತಾನೆ, ದೀಪದ ಮೊಲ್ಲೆಯ ಹುಡುಕಾಟದಲ್ಲಿ. ಇತ್ತ ಕಾಳಿಂಗನು ರಾಜಕುಮಾರನ ರೂಪ ತಾಳಿ ರಾಜಕುಮಾರನ ಹೆಂಡತಿಯೊಡನೆ ಸರಸದಲ್ಲಿ ತೊಡಗುತ್ತಾನೆ, ಆಕೆ ಗರ್ಭಿಣಿಯಾಗುತ್ತಾಳೆ. ಆಗ ರಾಜಕುಮಾರನಿಗೆ ತನ್ನ ಹೆಂಡತಿಯ ಶೀಲದ ಮೇಲೆ ಸಂದೇಹ. ಅವಳ ಪರೀಕ್ಷೆಯಾಗುತ್ತದೆ. ಅವಳು, "ನನ್ನ ಗಂಡ ಮತ್ತು ಈ ಸರ್ಪವನ್ನಲ್ಲದೇ ಬೇರೆ ಯಾವ ಗಂಡನನ್ನು ಮುಟ್ಟಿದ್ದರೂ ನನಗೆ ಈ ಸರ್ಪ ಕಚ್ಚಲಿ" ಎನ್ನುತ್ತಾಳೆ, ಗೆಲ್ಲುತ್ತಾಳೆ. ರಾಜಕುಮಾರನಿಗೆ ತಲೆ ಕೆಟ್ಟು ಅಂತಪುರಕ್ಕೆ ಪಹರೆಯಿಡುತ್ತಾನೆ. ಕಾಳಿಂಗ ಸಿಕ್ಕಿಹಾಕಿಕೊಳ್ಳುತ್ತಾನೆ. ಇಬ್ಬರಿಗೂ ಯುದ್ಧವಾಗಿ ಕಾಳಿಂಗ ಸಾಯುತ್ತಾನೆ, ಕಾಳಿಂಗ ಸಾಯುತ್ತಿದ್ದಂತೆ ರಾಜಕುಮಾರನೂ ಸಾಯುತ್ತಾನೆ. ಸಾಯುವಾಗ ಹೆಂಡತಿಗೆ ಹೇಳುತ್ತಾನೆ, "ನನ್ನಂತೆ ಈ ಹೊಟ್ಟೆಯಲ್ಲಿರುವ ಮಗುವನ್ನು ಎರಡು ಮಾಡಲು ಬಿಡಬೇಡ".
ಕತೆ ೨:
ಹಳ್ಳಿಯ ಶ್ರೀಮಂತ ಚಲುವ ಯಾವಾಗಲೂ ಇರುವುದು ತನ್ನ ವೇಶ್ಯೆಯ ಹತ್ತಿರವೇ! ತಾಯಿ ತಡೆಯಲಾಗದೇ ಮಗನ ಮದುವೆ ಮಾಡುತ್ತಾಳೆ, ಏನುಪಯೋಗ? ಹೆಂಡತಿಯ ಮೇಲೆ ಅವನಿಗೆ ಒಂಚೂರೂ ಮೋಹವಿಲ್ಲ. ಮನೆಯ ಹತ್ತಿರದ ಕಾಳಿಂಗವೊಂದು ಆ ಶ್ರೀಮಂತನ ರೂಪ ತಾಳಿ ಶ್ರೀಮಂತನ ಹೆಂಡತಿಯೊಡನೆ ರತಿಕ್ರೀಡೆಯಲ್ಲಿ ತೊಡಗುತ್ತದೆ, ಆಕೆ ಗರ್ಭಿಣಿಯಾಗುತ್ತಾಳೆ. ಮೇಲಿನ ತರಹದ್ದೇ ಪರೀಕ್ಷೆ, ಗೆಲ್ಲುತ್ತಾಳೆ. ಶ್ರೀಮಂತನಿಗೆ ತಲೆ ಕೆಟ್ಟು ಅವಳ ಮೇಲೆ ಕಣ್ಣಿಡುತ್ತಾನೆ, ಕಾಳಿಂಗ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇಬ್ಬರ ಯುದ್ಧದಲ್ಲಿ, ಕಾಳಿಂಗ ಸಾಯುತ್ತಾನೆ, ಶ್ರೀಮಂತ ತನ್ನ ತಪ್ಪಿನ ಅರಿವಾಗಿ ಹೊಟ್ಟೆಯಲ್ಲಿರುವ ಮಗುವನ್ನು ತನ್ನದೆಂದು ಒಪ್ಪಿ, ಹೆಂಡತಿಯೊಡನೆ ಸುಖವಾಗಿ ಬಾಳುತ್ತಾನೆ.
ಕತೆ ೩:
ವರ್ತಕರ ವಂಶ. ಮಗನಿಗೆ ಮದುವೆಯಾಗುತ್ತಿದ್ದಂತೆ ಆತ ಊರು ಬಿಟ್ಟು ಹೋಗುತ್ತಾನೆ. ಭೂತವೊಂದು ಆತನ ವೇಷ ಧರಿಸಿ ಅವನ ಹೆಂಡತಿಗೆ ಗರ್ಭಧಾರಣೆ ಮಾಡುತ್ತದೆ. ಆಮೇಲೆ ಎಲ್ಲ ಮೇಲಿನೆರೆಡು ಕತೆಗಳಲ್ಲಿದ್ದಂತೇ ನಡೆದು ಹೋಗುತ್ತದೆ.
ಮೊದಲ ಕತೆಯನ್ನು `ಸಿರಿಸಂಪಿಗೆ` ಎನ್ನುವ ನಾಟಕದ ರೂಪದಲ್ಲಿ ಬರೆದವರು ಚಂದ್ರಶೇಖರ ಕಂಬಾರ. ಎರಡನೇ ಕತೆ ಕಾರ್ನಾಡರ `ನಾಗಮಂಡಲ` ನಾಟಕ, ಆಮೇಲೆ ನಾಗಾಭರಣರು ಸಿನೆಮಾ ಮಾಡಿದರು. ಮೂರನೇ ಕತೆ, ಹಿಂದಿಯಲ್ಲಿ ಚಲನಚಿತ್ರವಾದ, "ಪಹೇಲಿ" (ಇದು ರಾಜಸ್ಥಾನಿ ಕತೆಯನ್ನ್ನು ಬರೆದವರು ವಿಜಯಧಾನ್ ದೇತಾ) .
ಈ ಕತೆ ಯಾಕೆ ಇಷ್ಟು ಜನರ ತಲೆ ತಿಂದು ನಾಟಕ, ಸಿನೆಮಾ ಆಯಿತು?
ಭಾರತೀಯ ತತ್ವಶಾಸ್ತ್ರದಲ್ಲಿ ದೇಹ ಮತ್ತು ಆತ್ಮ, ಲೌಕಿಕ ಮತ್ತು ಅಲೌಕಿಕ, ಕಾಮ ಮತ್ತು ಪ್ರೇಮ, ರಾಜಸ ಮತ್ತು ಸಾತ್ವಿಕ ಗಳ ನಡುವಿನ ಮಸೆದಾಟ ವೇದಗಳಿಂದಲೂ ಬಂದಿದೆ, ಭಾರತದ ಮೂಲೆ ಮೂಲೆಗಳಲ್ಲಿರುವ ಜನಪದ ಕತೆಗಳಲ್ಲಿ ಕೂಡ ಈ ತಿಕ್ಕಾಟ ಕಾಣಬಹುದು.
ಈ ಮೇಲಿನ ಮೂರು ಕತೆಗಳೂ ಒಂದೇ ಜಾನಪದ ಕತೆಯ ಬೇರೆ ಬೇರೆ ರೂಪಗಳು. ಆಧುನಿಕ ಸಾಹಿತ್ಯದಲ್ಲಿ, ಅದರಲ್ಲೂ ನವ್ಯ ಸಾಹಿತ್ಯದಲ್ಲಿ ಈ ತುಮುಲವನ್ನು ಮೇಲಿಂದ ಮೇಲೆ ನೋಡುತ್ತೇವೆ.
ದೇಹಕ್ಕಿಂತ ಮನಸ್ಸು-ಆತ್ಮ ಮುಖ್ಯ, ಲೌಕಿಕಕ್ಕಿಂತ ಅಲೌಕಿಕ, ಕಾಮುಕ್ಕಿಂತ ಪ್ರೇಮ-ಭಕ್ತ್ತಿ, ರಾಜಸಕ್ಕಿಂತ ಸಾತ್ವಿಕ ದೊಡ್ಡದು, ಮತ್ತು ಅದರ ಹುಡುಕಾಟದಲ್ಲೇ ನಮ್ಮ ಅಭಿವೃದ್ಧಿ-ಮುಕ್ತಿ, ಮೋಕ್ಷ ಎಂಬುದು ವೈದಿಕ ನಂಬಿಕೆ. ಆದರೆ ದೇಹ, ಲೌಕಿಕ, ಕಾಮಗಳಲ್ಲಿ ಮುಕ್ತಿ ಕಾಣುವ ಚಾರ್ವಾಕರು ವೇದಕಾಲದಿಂದಲೂ ಉಲ್ಲೇಖಗೊಂಡಿದ್ದಾರೆ. ವೈದಿಕದ ಕತೆಗಳಲ್ಲಿ ಆತ್ಮ ಗೆಲ್ಲುತ್ತದೆ (ನಚಿಕೇತ), ಪ್ರೇಮ ಗೆಲ್ಲುತ್ತದೆ (ಸಾವಿತ್ರಿ). ಆದರೆ ಜನಪದ ಕತೆಗಳಲ್ಲಿ ದೇಹ ಗೆಲ್ಲುತ್ತದೆ, ಕಾಮ ಮನುಷ್ಯನ ಸಹಜ ಗುಣ ಎನ್ನುತ್ತದೆ.
ಅಧುನಿಕ ಸಾಹಿತ್ಯದಲ್ಲಿ ಈ ವಿಭಜನೆಯ ಸಂಕೀರ್ಣತೆ ಈ ಮೂರು ಕತೆಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.