Friday 17 November 2017

ಹನಿಗವನಗಳ ಹೆಜ್ಜೆ ಹಿಡಿದು

 (ನವೆಂಬರ್ ನಾಕರಂದು ನಡೆದ `ಕನ್ನಡ ಬಳಗ, ಯು.ಕೆ` ಕಾರ್ಯಕ್ರಮದ `ಹನಿವನ ಗೋಷ್ಠಿ`ಯಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಶ್ರೀ ಡುಂಡಿರಾಜರ ಸಮ್ಮುಖದಲ್ಲಿ ಭಾಷಣ ಮಾಡಿದ್ದು)

ಹನಿಗವನಗಳು ಪುಟ್ಟ ಪುಟ್ಟ ಸಾಲುಗಳ ಚಿಕ್ಕ ಚಿಕ್ಕ ಪದ್ಯಗಳು. ಹಾಗೆಂದು ಈ ಲಘುಗವನಗಳನ್ನು ಲಘುವಾಗಿ ಪರಿಗಣಿಸಬೇಕಾಗಿಲ್ಲ.

ಕೆಲವೇ ಕೆಲವು ಸಾಲುಗಳಲ್ಲಿ ತಿಳಿ ಹಾಸ್ಯವನ್ನೋ, ಒಂದು ಚಿತ್ರವನ್ನೋ, ಒಂದು ಗೊಂದಲವನ್ನೋ, ಆತಂಕವನ್ನೋ, ದ್ವಂದ್ವವನ್ನೋ, ಚಟಾಕೆಯನ್ನೋ, ಶಬ್ದದ ಮಾಂತ್ರಿಕತೆಯನ್ನೋ, ವಿಸ್ಮಯವನ್ನೋ, ಅನಿರೀಕ್ಷಿತ ಪ್ರಾಸವನ್ನೋ, ಶ್ಲೇಷ (ಪನ್)ಯನ್ನೋ ಮೂಡಿಸುವ ಹನಿಕವಿತೆಗಳು ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವೇ.

ಮುಕ್ತಕ, ಬಿಡಿಗವನ, ಹನಿಗವನ, ಹನಿಕವಿತೆ, ಚುಟುಕು ಎಂದೆಲ್ಲ ಹೆಸರಿನಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಇತ್ತೀಚೆ ಹುಟ್ಟಿಕೊಂಡಿದ್ದಲ್ಲ.

ಬೇರೆ ಭಾಷೆಗಳಲ್ಲಿ ಹನಿಗವನಗಳು:

ಜಗತ್ತಿನ ಪ್ರತಿ ಭಾಷೆಯಲ್ಲೂ ಹನಿಗವನಗಳು ಇರಲೇಬೇಕು. ಎರಡರಿಂದ ಆರು ಸಾಲುಗಳವರೆಗೆ ಪುಟ್ಟ ಮಕ್ಕಳಿಗೆ ಹಾಡಲು ಹನಿಗವನಗಳು ಇರದ ಭಾಷೆ ಇರಲು ಸಾಧ್ಯವೆ?.

ಸಂಸ್ಕೃತ ಸುಭಾಷಿತಗಳು ಅಥವಾ ದೇವರ ಸ್ತುತಿಗಳು ವ್ಯಾಕರನ ಬದ್ಧವಾಗಿ ಸಿಗುವ ಜಗತ್ತಿನ ಮೊಟ್ಟಮೊದಲ ಹನಿಕವಿತೆಗಳಿರಬಹುದು ಎಂದು ನನ್ನ ಊಹೆ..

`यस्यास्ति वित्तं स नर:कुलीन: स पण्डित: स श्रुतवान् गुणज्ञाम्प;: |
स एव वक्ता स च दर्शनीय: सर्वे गुणा: काञ्चनमाश्रयन्ते ||`

(ಯಾರಲ್ಲಿ ವಿತ್ತವಿದೆಯೋ ಅವನೇ ನರಕುಲೀನ, ಅವನೇ ಪಂಡಿತ, ಅವನೇ ಶ್ರುತವಾನ್ ಗುಣಜ್ಞ
ಅವನೇ ವಾಗ್ಮಿ, ಅವನೇ ಸುಂದರ – ಎಲ್ಲ ಗುಣಗಳೂ ಕಾಂಚನವನ್ನು ಆಶ್ರಯಿಸುತ್ತವೆ)

ಎನ್ನುವ ಈ ಸುಭಾಷಿತ ಎರಡೇ ಸಾಲುಗಳಲ್ಲಿ ಏನೆಲ್ಲ ಹೇಳಿಬಿಡುತ್ತದಲ್ಲವೇ?

ಮೂರೇ ಸಾಲುಗಳಲ್ಲಿ ಒಂದು ಪ್ರಕೃತಿಯ ಚಿತ್ರವನ್ನೂ ಮನಸಿನ ಭಾವವನ್ನೂ ಏಕಕಾಲದಲ್ಲಿ ಚಿತ್ರಿಸುವ ಜಪಾನಿನ `ಹೈಕು`ಗಳಿಗೆ ಮಾರುಹೋಗದ ಹೈಕಳಿಲ್ಲ. ೫-೭-೫ ಉಚ್ಚಾರಗಳ (syllables) ಮೂರು ಸಾಲುಗಳು ಬಹುಷಃ ಪ್ರಪಂಚದ ಅತಿ ಚಿಕ್ಕ ಹನಿಗವನಗಳಿರಬಹುದು. ಜಪಾನಿನ ಉಚ್ಚಾರದ ಛಂದಸ್ಸನ್ನು ಇಂಗ್ಲೀಷಿಗಾಗಲಿ ಕನ್ನಡಕ್ಕಾಗಲಿ ತರುವುದು ತುಂಬ ಕಷ್ಟ.

古池
蛙飛び込む
水の音

(ಫುರು ಇಕೆ ಯಾ
ಕವಝು ತೊಬಿಕೊಮು
ಮಿಝು ನೊ ಒತೊ

ಹಾ! ಹಳೆ ಕೆರೆ
ಕಪ್ಪೆಯು ಜಿಗಿಯಲು
ನೀರಿನ ಧ್ವನಿ)

`ಇಂಗ್ಲೀಷಿನ ಲಿಮಿರಿಕ್ಕುಗಳು ಐದು ಸಾಲಿನ ಪುಟ್ಟ ಕವನಗಳು. ಹೆಚ್ಚು ಮಟ್ಟಿಗೆ ತಮಾಷೆಯನ್ನೇ ಬಿಂಬಿಸುವ ಕವನಗಳು.

“Hickory, dickory, dock,
The mouse ran up the clock.
The clock struck one,
And down he run,
Hickory, dickory, dock.”

ಎನ್ನುವ ನರ್ಸರಿ ಪದ್ಯ ಕೇಳದವರುಂಟೆ?

ಹಿಂದಿಯಲ್ಲಿ ಉರ್ದುವಿನಲ್ಲಿ ಹನಿಕವನ ಸಾಹಿತ್ಯವೆಂದರೆ ಎರಡು ಸಾಲುಗಳಲ್ಲಿ ಹಾಸ್ಯವನ್ನು, ದುಃಖವನ್ನು, ನೆನಪನ್ನು, ವಿರಹವನ್ನು, ಪ್ರೇಮವನ್ನು ಹೇಳುವ ಶಾಯರಿಗಳು.

होश वालों को ख़बर क्या बेख़ुदी क्या चीज़ है
इश्क़ कीजे फिर समझिये ज़िन्दगी क्या चीज़ है

(ಶ್ಯಾಣ್ಯಾ ಮಂದಿಗೇನ್ ಗೊತ್ತು ಹುಚ್ಚತನ ಅಂದ್ರೇನಂತ
ಪ್ರೀತ್ಯಾಗ್ ಬೀಳ್ರಿ ಮತ್ತ ತಿಳ್ಕೋರ್ರಿ ಜೀವನ ಅಂದ್ರೇನಂತ)

ಎನ್ನುವ ವಿರುದ್ಧ ಅರ್ಥಗಳ ಸಾಲುಗಳಿಗೆ ಮಾರುಹೋಗದವರಾರು?

ಹೀಗೆ ನೋಡುತ್ತ ಹೋದರೆ ಪ್ರತಿ ಭಾಷೆಯಲ್ಲೂ ಹನಿಗವನಗಳು ಸಿಗುತ್ತವೆ.

ಕನ್ನಡದಲ್ಲಿ ಹನಿಗವನದ ಇತಿಹಾಸ:

ಕನ್ನಡದಲ್ಲಿ ಹನಿಗವನಗಳ ಉಗಮ ಮಕ್ಕಳನ್ನು ಆಡಿಸುವ ಮಾತೆಯರ ಮಾತುಗಳಿಂದಲೇ ಎನ್ನುವುದರಲ್ಲಿ ನನಗಂತೂ ಸಂಶಯವಿಲ್ಲ.

`ಆನಿ ಬಂತೊಂದಾನಿ
ಇದ್ಯಾ ಊರ ಆನಿ
ವಿಜಾಪುರದ ಆನಿ
ಇಲ್ಲಿಗ್ಯಾಕ ಬಂತು
ಹಾದಿ ತಪ್ಪಿ ಬಂತು
ಹಾದಿಗೊಂದು ದುಡ್ಡು
ಬೀದಿಗೊಂದು ದುಡ್ಡು`

ಎಂದು ಮಗುವನ್ನು ತೊಡೆಯ ನಡುವೆ ಮಲಗಿಸಿ, ಗಲ್ಲ ತಟ್ಟುತ್ತ, ಚಿಟಿಕೆ ಹೊಡೆಯುತ್ತ ನಗಿಸುವ ಇಂಥ ಪುಟ್ಟ ಹಾಡುಗಳು ಕನ್ನಡದ ಹನಿಗವನದ ಉದಾಹರಣೆಗಳು.

ಬಹುಷಃ ಕನ್ನಡದ ಪ್ರಕಟಿತ ಮೊಟ್ಟಮೊದಲ ಹನಿಗವನ ಸಾಹಿತ್ಯ ಸಿಗುವುದು ಶಿಲಾಶಾಸನಗಳಲ್ಲಿ.

`ಸಾಧುಂಗೆ ಸಾಧುಂ ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುವ ವಿಪರೀತನ್
ಮಾಧವನೀತನ್ ಪೆರನಲ್ಲ`

ಎನ್ನುವ ಚಲುಕ್ಯರ (ಇದನ್ನು ಚಾಲುಕ್ಯರು ಎಂದು ಬರೆಯುವುದು ವಾಡಿಕೆ) ಕಾಲದ ಶಾಸನ ಇದಕ್ಕೊಂದು ನಿದರ್ಶನ.

ಕನ್ನಡದ ಕಂದ ಪದ್ಯಗಳು ಕೂಡ ಹನಿಕವಿತೆಗಳೇ. ಕನ್ನಡದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲ ಕೃತಿ `ಕವಿರಾಜಮಾರ್ಗ`ದಲ್ಲೇ ಕಂದಪದ್ಯಗಳಿಲ್ಲವೇ?

ಕನ್ನಡ ಜನಪದ ತ್ರಿಪದಿಗಳು ಕನ್ನಡ ಸಾಹಿತ್ಯದ ಸುಂದರ ಹನಿಗವಿತೆಗಳ ತವರು:

“ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದವ್ವ ಒಳ ಹೊರಗ ಆಡಿದರ
ಬೀಸಣಿಗಿ ಗಾಳಿ ಸುಳಿದಾವ”

ಸರ್ವಜ್ಞನ ವಚನಗಳು ಇದೇ ತ್ರಿಪದಿಯ ಸಾಲುಗಳಲ್ಲಿ ಬರೆದ ತತ್ತ್ವಶಾಸ್ತ್ರದ ಕಿರು ಪದ್ಯಗಳು:

`ಬೆಚ್ಚನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿಯಿರಲು। ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ॥`
೧೨ನೇ ಶತಮಾನದ ಆಚೆ ಈಚೆ ಬರೆದ ಶರಣರ ವಚನಗಳು ಕೂಡ ಹನಿಕವಿತೆಗಳೇ:

`ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮ ದೇವರ ನೊಲೆಸುವ ಪರಿ`

ಎಂದು ಬಸವಣ್ಣನವರು ಕೆಲವೇ ಕೆಲವು ಸಾಲುಗಳಲ್ಲಿ ಅಗಾಧ ಕಾವ್ಯವನ್ನೇ ತುಂಬುತ್ತಾರೆ.

ಮುಂದೆ ವೈಷ್ಣವ ಪಂಥದ ದಾಸರು ಕೀರ್ತನಗಳನ್ನು ಹಾಡಿದರೂ ಉಗಾಭೋಗಗಳೆಂಬ ಸಣ್ಣ ಹಾಡುಗಳನ್ನು ಬರೆದರು:

`ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!`

ಇಂಥ ಧೀರ್ಘ ಇತಿಹಾಸವಿರುವ ಹನಿಗವನ ಸಾಹಿತ್ಯವನ್ನು ವಿಮರ್ಶಕರು ಲಘುವಾಗಿ ಕಾಣುತ್ತಾರೆ. ಹನಿಗವನಗಳು ಅರ್ಥವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವ ಕಾರಣಕ್ಕೆ ವಿಮರ್ಶಕರಿಗೆ ಹೆಚ್ಚಿಗೆ ಹೇಳಲು ಏನೂ ಇರುವುದಿಲ್ಲ ಅನ್ನುವುದೂ ಒಂದು ಕಾರಣವಿರಬಹುದು.

ಹೊಸಕನ್ನಡದಲ್ಲಿ ಹನಿಗವನಗಳು:

ಹೊಸ ಕನ್ನಡದಲ್ಲಿ ಮೊಟ್ಟಮೊದಲು ಚುಟುಕು ಸಾಹಿತ್ಯದ ಪುಸ್ತಕವನ್ನ್ನು ಹೊರತಂದವರು ಜಿ ಪಿ ರಾಜರತ್ನಂ ಇರಬೇಕು. ೧೯೪೦ ರಲ್ಲಿ ಪ್ರಕಟಗೊಂಡ `ನೂರು ಪುಟಾಣಿ; ಬಹುಷಃ ಕನ್ನಡ ಪ್ರಪ್ರಥಮ ಹೊಸಗನ್ನಡದ ಚುಟುಕು ಸಂಕಲನ.

ಆದರೂ ಹನಿಗವನ ಸಾಹಿತ್ಯಕ್ಕೆ ಮೊಟ್ಟಮೊದಲು `ಚುಟುಕು` ಎನ್ನುವ ಶಬ್ದವನ್ನು ಕೊಟ್ಟ ಇತಿಹಾಸ ನನಗೆ ಸಿಗಲಿಲ್ಲ!

ಮುಕ್ತಕಗಳು ಎಂದು ಕರೆದಿರುವ ಡಿ ವಿ ಜಿವಯರ `ಮಂಕುತಿಮ್ಮನ ಕಗ್ಗ` ಮತ್ತು `ಮರಳುಮುನಿಯನ ಕಗ್ಗ` ಸಂಕಲನಗಳು ಬಿಡಿ-ಚಿಕ್ಕ ಪದ್ಯಗಳ ಸಂಕಲನಗಳೇ! ಇಲ್ಲಿನ ಆದಿಪ್ರಾಸವನ್ನು ಗಮನಿಸಬೇಕು.

`ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು


ಕನ್ನಡ ಪ್ರಸಿದ್ಧ ಕವಿಗಳೆಲ್ಲ ಹನಿಗವನ ಬರೆದವರೇ. `ರಾಮಾಯಣ ದರ್ಶನ` ಮಹಾಕಾವ್ಯ ಬರೆದಿರುವ ಕುವೆಂಪು ಅವರ `ಮಂತ್ರಾಕ್ಷತೆ` ಕವನ ಸಂಕಲನದಲ್ಲಿ ೧೧೭ ಬಿಡಿಗವನಗಳಿವೆಯಂತೆ!ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ`

ಹತ್ತು ಸಾವಿರಕ್ಕೂ ಹೆಚ್ಚು ಚೌಪದಿ ಬರೆದಿರುವ ದಿನಕರ ದೇಸಾಯಿಗೆ ಚುಟುಕ ಬ್ರಹ್ಮನೆಂದೇ ಕರೆದಿದ್ದಾರೆ. ಮುಖ್ಯವಾಗಿ ರಾಜಕೀಯವನ್ನು ವಿಡಂಬಣೆ ಮಾಡುತ್ತ ದಿನ ನಿತ್ಯದ ಆಗುಹೋಗುಗಳಿಗೆ ನಾಕುಸಾಲಿನ ಪುಟ್ಟಪದ್ಯಗಳಲ್ಲಿ ಸಾಹಿತ್ಯ ಬರೆದರು:

`ಕಲ್ಲಿಗೂ ದೃಢವಾಗಿ ಮನುಜ ಸಂಕಲ್ಪ |
ಹೂವಾಗಿ ಅರಳಿದರೆ ಗೊಮ್ಮಟನ ಶಿಲ್ಪ |
ಉಕ್ಕಿಗೂ ಬಿರುಸಾಗಿ ಮಾನವನ ಹೃದಯ |
ಬೆಣ್ಣೆಯೊಲು ಕರಗಿದರೆ ಗೌತಮನ ಉದಯ |`

ಪ್ರಜಾವಾಣಿಯ ಸಂಪಾದಕರಾಗಿದ್ದ ವೈ ಎನ್ ಕೆಯವರದು ಇಂಗ್ಲೀಷ್ ಮತ್ತು ಕನ್ನಡ ಎರಡು ಭಾಷೆಗಳ ಜೊತೆ ಆಡುತ್ತ, ಪದಗಳನ್ನು ಮುರಿಯುತ್ತ, ಶ್ಲೇಷೆ (ಪನ್)ಗಳನ್ನು ಹುಡುಕುತ್ತ ಚುಟುಕುಗಳನ್ನು ನಿರ್ಮಿಸಿದರು:

`ಕವಿತೆ,
ನೀನೇಕೆ ಪದಗಳಲಿ
ಅವಿತೆ?`

ಎಂದು ಕವಿತೆಗೇ ಪ್ರಶ್ನೆ ಹಾಕಿದರು.

ಲಂಕೇಶ ಪತ್ರಿಕೆಯ ಜಾಗಗಳನ್ನು ತುಂಬಲು, ಲಂಕೇಶರು `ನೀಲು` ಎನ್ನುವ ಹೆಸರಿನಲ್ಲಿ ಸಣ್ಣ ಪದ್ಯಗಳನ್ನು ಬರೆದರು. ಅವುಗಳನ್ನು `ನೀಲುಗಳು` ಎಂದೇ ಕರೆದು ನೀಲು-ಸಂಕಲನಗಳನ್ನು ಹೊರತಂದಿದ್ದಾರೆ. ಲಂಕೇಶರ ಹನಿಗವನಗಳಲ್ಲಿ ಪ್ರಾಸ, ಛಂದಸ್ಸುಗಳಿಲ್ಲ. ವಾಕ್ಯವನ್ನು ತುಂಡರಿಸಿ ಬರೆದಂತಿರುವ ಸಾಲುಗಳು ಕೆಲವೊಮ್ಮೆ ಅಗಾಧ ಅರ್ಥವನ್ನು ಹೊಮ್ಮಿಸುತ್ತವೆ.

ಕನ್ನಡದ ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಚುಟುಕುಗಳಿಗೆ ವಿಶಿಷ್ಟ ಜಾಗವಿದೆ. ಪ್ರತಿವಾರ ಹತ್ತಾರು ಚುಟುಕುಗಳು ಪ್ರತಿ ಪತ್ರಿಕೆಯನ್ನು ತುಂಬುತ್ತವೆ.

ಡುಂಡಿರಾಜರು ಹನುಗವನಗಳ ರಾಜನೆಂದೇ ಹೇಳಬಹುದು. ಅವರು ಬರೆದ ಕೆಲವು ಹನಿಗವಿತೆಗಳು ಕನ್ನಡಿಗರ ಬಾಯಲ್ಲಿ ಬಾಯಿಪಾಠ. ಅವರು `ಹನಿಗಾರಿಕೆ` ಎಂದು ಹನಿಗವನಗಳಿಗೆ ಹೊಸ ಶಬ್ದೋತ್ಪತ್ತಿ ಮಾಡಿದ್ದಾರೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಸಂಸಾರಗಳು ಇವರ ಮೆಚ್ಚಿನ ವಸ್ತುಗಳು.

`ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು`

ಎಂದು ಮೂರೇ ಸಾಲುಗಳಲ್ಲಿ ಧಸಕ್ಕೆಂದು ಬರುವ ಅನಿರೀಕ್ಷಿತ ಪ್ರಾಸದಿಂದ ನಮ್ಮನ್ನು ನಗಿಸಿಬಿಡುತ್ತಾರೆ.

ಹನಿಗವನಗಳ ವರ್ತಮಾನ/ಭವಿಷ್ಯ:

ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ಕವನಗಳನ್ನು ಓದಲು ಯಾರಿಗೂ ಪುರುಸೊತ್ತಿಲ್ಲ. ಕ್ಲಿಷ್ಟದ ಕವಿತಗಳನ್ನು ಎರಡೆರಡು ಸಲ ಓದುವ ತಾಳ್ಮೆ ಇರುವವರು ಕಮ್ಮಿ. ಹನಿಗವನಗಳು ಈಗಿನ ಸ್ಮಾರ್ಟ್ ಫೋನಿನ ಕಾಲದಲ್ಲಿ, ಸೋಶಿಯಲ್ ಮೀಡಿಯಾದ ಜಗತ್ತಿನಲ್ಲಿ ತುಂಬ ಚೆನ್ನಾಗಿ ಒಗ್ಗುತ್ತವೆ. ಅವಕ್ಕೆ ಎಸ್ಸೆಮ್ಮೆಸ್ ಕವನಗಳು, ಟ್ವಿಟರ್ ಚುಟುಕುಗಳು, ಫೇಸ್-ಬುಕ್ ಕವನಗಳು, ಇನ್ಸ್ಟಾಗ್ರಾಮ್ ಕವಿತೆಗಳು, ಟಂಬ್ಲರ್ ಸಾಲುಗಳು ಎಂದೆಲ್ಲ ಕರೆದರೂ ತಪ್ಪಿಲ್ಲ.

ಇಷ್ಟೆಲ್ಲ ಬರೆದ ಮೇಲೆ ನನ್ನದೊಂದು ಹನಿಗವನದಿಂದ ಈ ಲೇಖನವನ್ನು ಮುಗಿಸದಿದ್ದರೆ ಆದೀತೆ?

ಭಾರತಕ್ಕೂ ಇಂಗ್ಲಂಡಿಗೂ
ಏನು ಅಂತರ?
ಭಾರತದಾಗ ನೀರ
ಇಂಗ್ಲಂಡದಾಗ ಪೇಪರ

ಗ್ರಂಥಋಣ:
ಸುಬ್ರಮ್ರಣ್ಯ ನಾರಾಯಣ ಹೆಗಡೆ. `ಕನ್ನಡದಲ್ಲಿ ಚುಟುಕು ಸಾಹಿತ್ಯ`: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೨೦೦೯