Sunday 9 July 2006

ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಲ್ಲ

ಇದ್ದ 
ನಮ್ಮಜ್ಜ-ಅಜ್ಜಿಯರ 
ನಮ್ಮಪ್ಪ-ಅಮ್ಮರ 
ನನ್ನ-ನಿನ್ನ 
ನಡುವೆ 
ಇದ್ದ 

ನಮ್ಮಜ್ಜ 
ತನಗೆ ವಾರಸುದಾರರಿಲ್ಲವೆಂದು 
ತನ್ನ ಮೂರನೇ ಹೆಂಡತಿಯಲ್ಲಿ 
ನನ್ನಪ್ಪನನ್ನು ಬಿತ್ತುವ ವೇಳೆ 
ಎದ್ದ 

ನನ್ನಪ್ಪ ಮೆಟ್ರಿಕ್ಯುಲೇಷನ್ನು ಮುಗಿಸಿ 
ಬ್ರಿಟೀಷರ ಕೆಳಗೆ ಮಾಮಲೆದಾರನಾಗಿ 
ಸಂಬಳವೆಣಿಸುತ್ತಿರುವಾಗ 
ಗೆದ್ದ 

ನಾನು 
ಪುಗಸಟ್ಟೆ 
ಎಂಬಿಬಿಎಸ್ ಮುಗಿಸಿ 
ದೇಶಬಿಟ್ಟು 
ಇಂಗ್ಲಂಡಿಗೆ ಬಂದಾಗ 
ಬಿದ್ದ

Monday 3 July 2006

ಸಿನೆಮಾ: ಕನ್ನಡ: ತಬ್ಬಲಿಯು ನೀನಾದೆ ಮಗನೇ


ಶಿಕ್ಶ್ಷಿತ-ಪಾಶ್ಚ್ಯಾತ್ಯ-ಆಧುನಿಕ-ಬಂಡವಾಳಶಾಹಿತನ ಮತ್ತು ಅಶಿಕ್ಷಿತ-ಭಾರತೀಯ-ಸನಾತನ-ಸಮಾಜವಾದಗಳ ನಡುವಿನ ಸಂಕೀರ್ಣ ತಿಕ್ಕಾಟವೇ ಕತೆಯ ವಸ್ತು. 

ಅಮೇರಿಕದಲ್ಲಿ ಓದಿ, ಅಲ್ಲಿಯವಳನ್ನೇ ಮದುವೆಯಾಗಿ, ತನ್ನ ಹಳ್ಳಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಧೃಡನಿಶ್ಚಯದಿಂದ ಭಾರತಕ್ಕೆ ನಾಯಕ ಮರಳುತ್ತಾನೆ. ತಂದೆ ಸತ್ತಾಗ ತಲೆ ಬೋಳಿಸಿಕೊಳ್ಳುವುದರಿಂದ ಶುರುವಾಗುವ ಈ ಘರ್ಷಣೆ, ನಾಯಕನ ಹೆಂಡತಿ ಹಳ್ಳಿಗೆ ಬರುವುದು, ನಾಯಕನ ತಾಯಿಯ ಮರಣ, ನಾಯಕನ ಹೆಂಡತಿ ಗೋಮಾಂಸ ತಿನ್ನುವುದು - ಈ ದೃಶ್ಯಗಳಲ್ಲಿ ಬಿಚ್ಚಿಕೊಳ್ಳುತ್ತ, ನಾಯಕನ ಮಗುವಿಗೆ ಹಾಲು ಬೇಕಾಗುವ ದೃಶ್ಯದಲ್ಲಿ ಪರಾಕಾಷ್ಟೆ ತಲುಪುತ್ತದೆ. 

ಇದೆಲ್ಲದರಿಂದ ಬೇಸತ್ತು, ಹಳ್ಳಿಯನ್ನು ಬಿಟ್ಟು ಮರಳಿ ಅಮೇರಿಕಕ್ಕೆ ಹೋಗುವ ನಿರ್ಧಾರ ಮಾಡುತ್ತಾನೆ ನಾಯಕ. ಅಂತ್ಯದಲ್ಲಿ, ಮರಳಿ ಮಣ್ಣಿಗೆ ಮರಳುವ ನಿಶ್ಚಯದಿಂದ ತನ್ನ ಮಾರಿದ ಗೋವುಗಳನ್ನು ಗುರುತಿಸಲಾಗದೇ ಗೋವಿಗಳ ಹೆಸರುಗಳನ್ನು ಕೂಗುವ ವ್ಯರ್ಥ ಪ್ರಯತ್ನದಲ್ಲಿ ಚಿತ್ರ ಮುಗಿಯುತ್ತದೆ.

ಚಿತ್ರ ಗೋವಿನ ಹಾಡಿನಿಂದ ಶುರುವಾಗುತ್ತದೆ ಮತ್ತು ಚಿತ್ರದ ಸಂಕೇತವೂ ಆಗುತ್ತದೆ. `ಗೋವಿನ ಹಾಡಿ`ನಲ್ಲಿ ಗೊಲ್ಲ ಕೂಗಿದರೆ ಎಲ್ಲ ಹಸುಗಳೂ ಬಂದು ನಿಲ್ಲುತ್ತವೆ, ಇಲ್ಲಿ ನಾಯಕನಿಗೆ ತನ್ನ ಹಸುಗಳು ಯಾವುವು, ಅವುಗಳ  ಹೆಸರೇನು ಒಂದೂ ಗೊತ್ತಿಲ್ಲ, ಸುಮ್ಮನೇ 'ಗಂಗೇ, ತುಂಗೇ,' ಎಂದು ಕೂಗುತ್ತಾನೆ; ಚಿತ್ರದ ಆರಂಭದ ಗೋವಿನ ಹಾಡು, ಚಿತ್ರದ ಅಂತ್ಯದಲ್ಲಿ ಸಫಲಗೊಳ್ಳುತ್ತದೆ. 

ಚಿತ್ರದ ನಾಯಕನ ಹೊಸ ಮನೆ ಕೃತಕವಾಗಿ ಕಂಡರೂ, ಭಾರತದ ಹಳ್ಳಿಯಲ್ಲಿ ಪಶ್ಚಿಮದ ಆಧುನಿಕತೆಯನ್ನು ತರಲು ಹೆಣಗುವ ನಾಯಕನ ಮನಸ್ಥಿತಿಯ ಕನ್ನಡಿಯಂತಿದೆ. ಹಳ್ಳಿಯ ಹೊರಾಂಗಣ ಚಿತ್ರಣದಲ್ಲಿ ಎಲ್ಲೂ ಹಳ್ಳಿಯ ಅಥವಾ ನಿಸರ್ಗದ ರೋಮ್ಯಾಂಟಿಸಿಸಂ ಇಲ್ಲ; ಬದಲಿಗೆ ಹಳ್ಳಿಯ ದಾರಿದ್ರ್ಯ, ಬಿಸಿಲಿನ ಬೇಗೆ ಕಣ್ಣಿಗೆ ರಾಚುವಂತೆ ಚಿತ್ರಸಿದ್ದಾರೆ. 

ಚಿತ್ರದ ಮಾತುಗಳು ಚಿತ್ರದ ಶಕ್ತಿ: ಶಾಸ್ತ್ರಿ ಮತ್ತು ನಾಯಕನ ಮಾತುಗಳಲ್ಲೇ ಭಾರತೀಯತೆ-ಪಾಶ್ಚ್ಯಾತತೆ, ಸಂಪ್ರದಾಯ-ನವ್ಯತೆ, ಸಮಾಜವಾದ-ಬಂಡವಾಳಶಾಹಿ, ಸನಾತನತೆ-ಆಧುನಿಕತೆಗಳ ಗೊಂದಲ, ಘರ್ಷಣೆಗಳ ಜೊತೆಜೊತೆಗೆ ಮನುಷ್ಯ ಸಹಜವಾದ ಈರ್ಷೆ, ದ್ವೇಷ, ಸ್ನೇಹ, ಮಾನವೀಯತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. 

ಚಿತ್ರ ನಾಯಕ ಹಳ್ಳಿಯನ್ನು ಬಿಡುವ ನಿರ್ಧಾರ ಮಾಡುವವರೆಗೂ ವಾಸ್ತವಿಕವಾಗಿದೆ, ಅಲ್ಲಿಂದ ಮುಂದೆ ಕತೆ ಇದ್ದಕ್ಕಿದ್ದಂತೆ ಕೃತಕವಾಗಿತ್ತದೆ; ಆದರ್ಶೀಕರಣದತ್ತ, ಭಾರತೀಯತೆಯ 'ಸನಾತನ ವಿಜಯ'ದತ್ತ ಸಾಗುತ್ತದೆ. 

ನನ್ನ ದೃಷ್ಟಿಯಲ್ಲಿ ನಾಯಕ ತಬ್ಬಲಿಯಾಗುವುದು ನಿಜ, ಆದರೆ ಚಿತ್ರದಲ್ಲಿರುವ ಹಾಗಲ್ಲ. ವಾಸ್ತವಿಕವಾಗಿ ನೋಡಿದರೆ ನಾಯಕನ ಸ್ಥಿತಿಯಲ್ಲಿ ಯಾರೂ ಹಳ್ಳಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ನಾಯಕನ ಹೆಂಡತಿಗಂತೂ ಅಸಾಧ್ಯ. 

ನನ್ನ ಪ್ರಕಾರ ಚಿತ್ರದ ಅಂತ್ಯ: ಚಿತ್ರ/ ಕಾದಂಬರಿಯಲ್ಲಿ ನಡೆಯುವಂತೆ ನಾಯಕ-ನಾಯಕನ ಹೆಂಡತಿ (ಆಧುನಿಕತೆ-ಪಾಶ್ಚ್ಯಾತ್ಯ-ಶಿಕ್ಷಿತ) ತಮ್ಮ ಮಗುವಿಗಾಗಿ ಗೋವಿನ ಕೆಚ್ಚಲನ್ನು ಹುಡುಕಿಕೊಂಡು ಹೋಗುವುದಿಲ್ಲ (ತುಂಬ ಅವಾಸ್ತವಿಕ ದೃಶ್ಯವಿದು) ಮತ್ತು ಹಳ್ಳಿ (ಸನಾತನ-ಭಾರತೀಯತೆ-ಮೌಢ್ಯ)ಗರ ಮುಂದೆ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ತನ್ನ ಆಸ್ಠಿಯನ್ನೆಲ್ಲ ಮಾರುವ ನಿರ್ಧಾರ ಮಾಡುತ್ತಾನೆ. ನಾಯಕಿಗೆ ದಿನ ಕಳೆದಂತೆ ಇದೆಲ್ಲ ಅಸಹನೀಯವಾಗುತ್ತದೆ. ಆಕೆ ನಾಯಕನನ್ನು ತೊರೆದು ಮರಳಿ ಅಮೇರಿಕಕ್ಕೆ ಹೋಗುತ್ತಾಳೆ; ಹಳ್ಳಿಯ ಜನ ಇದು ತಮ್ಮ ವಿಜಯವೆಂದುಕೊಂಡು ನಾಯಕನಿಗೆ ಹಳ್ಳಿಯಲ್ಲಿ ಉಳಿಯಲು ಅಂಗಲಾಚುತ್ತಿರುವಾಗ ನಾಯಕ ಹಳ್ಳಿಯನ್ನು ತೊರೆದು ಹೋಗುವ ದೃಶ್ಯದಲ್ಲಿ ಚಿತ್ರ ಮುಗಿಯುತ್ತದೆ. ನಾಯಕ, ನಾಯಕನ ಹೆಂಡತಿ-ಮಗು ಮತ್ತು ಹಳ್ಳಿ, ಮೂವರೂ ತಬ್ಬಲಿಗಳಾಗುತ್ತಾರೆ. 

ಈ ಸಿನೆಮಾವನ್ನು ಇಲ್ಲಿ ನೋಡಬಹುದು. 

Sunday 2 July 2006

ಸ್ಕ್ರಿಪ್ಟ್

ನನಗೆ ಬೇಕಾದಂತೆ 
ನನ್ನ ಸ್ಕ್ರಿಪ್ಟ್ ಬರೆಯಬೇಕು 
ಆದರೆ ನನ್ನೊಳಗಿನ ಕತೆಗಾರನ ಪಕ್ಕದಲ್ಲಿ 
ಕೂತಿದ್ದಾನೆ ನಿರ್ಮಾಪಕ 
He needs a hit. 
BLOCK BUSTER! 
M-O-N-E-Y-S-P-I-N-N-E-R ! 

ಹೇಳುತ್ತಾನೆ ಕತೆಗಾರನಿಗೆ, 
`ನಿನ್ನಂತೆ ಬರೆದರೆ 
ಒಂದೇ ಒಂದು ಥೇಟರು ಸಿಗುವುದಿಲ್ಲ 
ಸಿಕ್ಕರೂ ಎರಡನೇ ದಿನ ನೊಣ ಹೊಡೆಯಲೂ ಜನ ಸಿಗುವುದಿಲ್ಲ 
ಅವಾರ್ಡು ಬರುತ್ತೆ ಅನ್ನುತ್ತೀಯಾ? 
ಆ ಕಾಲವೂ ಮುಗಿಯಿತಯ್ಯಾ 
ಅಲ್ಲಿ ಕೂತವರೂ ನನ್ನಂಥವರೇ 
ನಿನ್ನ ಭಾಷೆ ನಮಗೆ ಅರ್ಥವಾಗುವುದಿಲ್ಲ 
ಅಪ್ಪಿ ತಪ್ಪಿ ಅವಾರ್ಡು ಬಂತು ಅಂದುಕೋ 
ಹೊಟ್ಟೆಗೆ ಏನು ಮಾಡ್ತೀಯಾ? 
ಹಾಕಿದ ದುಡ್ಡು ಹೇಗೆ ವಾಪಸ್ಸು ತೆಗೀತೀಯಾ? 
ಮಾಡಿದ ಸಾಲ ಹೇಗೆ ತೀರಸ್ತೀಯಾ?` 

ಕತೆಗಾರ ಬರೆಯುತ್ತಿದ್ದಾನೆ 
ನಿರ್ಮಾಪಕ ಹೇಳಿದಂತೆ