Saturday 25 September 2021

ಇಂಗ್ಲೆಂಡ್ ಪತ್ರ 10

ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು: ಭಾಗ 1

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‍ಲಿಪಿ, ಮೈಲಾಂಗ್ ಎನ್ನುವ ಆ್ಯಪ್‍ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ. 

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‍ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ (ಎರಡು ಭಾಗಗಳಲ್ಲಿ). 

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರೆ ನೇರ ಪರಿಣಾಮವಿದು  (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ). 

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.   

ತಂತ್ರಜ್ಙಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟಿಕೊಟ್ಟವು.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ. 

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?:

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮಚಿಹ್ನೆಗಳ (ದುರು)ಪಯೋಗ: 

ನಾವು ಬರೆಯುವಾಗ ಬಹಳಷ್ಟು ವಿರಾಮಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ,  ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು. 

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (...), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ. 

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ. 

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿ‘ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘...‘ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಪಿಪ್ಸನ್ನು ತಿದ್ದಿವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.  

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ. 


Saturday 11 September 2021

ಇಂಗ್ಲೆಂಡ್ ಪತ್ರ 9

ಸಿನೆಮಾ ನೋಡುವ ಚಟ

ಈ ಇಂಗ್ಲೆಂಡ್ ದೇಶಕ್ಕೆ ಹೊಸದಾಗಿ ಬಂದಾಗ (2004) ಹಿಂದಿಭಾಷೆಯ ದೊಡ್ಡ ಬಜೆಟ್ಟಿನ ಚಲನಚಿತ್ರಗಳು ಮಾತ್ರ ಟಾಕೀಜುಗಳಲ್ಲಿ ಅಥವಾ ಮಲ್ಟಿಪ್ಲೆಕ್ಸುಗಳಲ್ಲಿ ನೋಡಲು ಸಿಗುತ್ತಿದ್ದವು. ಆ ಸಿನೆಮಾಹಾಲು-ಮಲ್ಟಿಪ್ಲೆಕ್ಸುಗಳೋ, ನಾವಿರುವ ಮನೆಯಿಂದ ಇಪ್ಪತ್ತರಿಂದ ನಲವತ್ತು ಮೈಲಿ ದೂರದ ನೆರೆಯ ಊರುಗಳಲ್ಲಿ ಬರುತ್ತಿದ್ದವು. ಅಷ್ಟು ದೂರ ಕಾರೋಡಿಸಿಕೊಂಡು, ಸಿನೆಮಾ ನೋಡಿ, ದೂರ ವಾಪಸ್ ಬರುವಷ್ಟರಲ್ಲಿ ತಲೆ ನೋವು, ಸುಸ್ತು, ನಿದ್ದೆ.

ಟಿವಿಯಲ್ಲಿ ಆಗಲೇ ಹಿಂದಿಯ ಚಾನೆಲ್‍ಗಳು ಬರುತ್ತಿದ್ದವು, ಆದರೆ ಅವಕ್ಕೆ ಸಾಕಷ್ಟು ದುಡ್ಡು ಸುರಿಯಬೇಕಿತ್ತು. ಪ್ರತಿ ಹಿಂದಿ ಚಾನೆಲ್‍ಗೆ ಐದಾರು ಪೌಂಡು ಕೊಡಬೇಕಾಗುತ್ತಿತ್ತು. ಅಷ್ಟು ಕೊಟ್ಟರೂ ನೋಡಲು ಸಿಗುತ್ತಿದುದು ಈಗಾಗಲೇ ಹತ್ತಾರು ನೋಡಿದ ಶಾರೂಖ್‍ಖಾನ್ ಸಿನೆಮಾಗಳೋ ಇಲ್ಲ ಸೂಪರ್ ಹಿಟ್ ಆದ ಸಿನೆಮಾಗಳೋ ಮಾತ್ರ. ಹಿಂದಿ ಭಾಷೆಯಲ್ಲಿ ತಯಾರಾಗುವ ಸೂಕ್ಷ್ಮಸಂವೇದನೆಯ ಸಿನೆಮಾಗಳು ಟಾಕೀಜುಗಳಲ್ಲಿ ಅಥವಾ ಟಿವಿ ಚಾನೆಲ್ಲುಗಳಲ್ಲಿ ಬರುತ್ತಿರಲಿಲ್ಲ. 

ಹಿಂದಿಗಿಂತ ಹೆಚ್ಚಾಗಿ ಕನ್ನಡ ಸಿನೆಮಾಗಳನ್ನು ನೋಡುತ್ತ ಬಾಲ್ಯ ಕಳೆದವನು ನಾನು. ರಾಜಕುಮಾರ್ ಎಂದರೆ ಪಂಚಪ್ರಾಣ, ಎಷ್ಟೆಂದರೂ ಅವನು ನಮ್ಮ ತಾಯಿಯ ಕಡೆಯ ಕುಟುಂಬದ ಆರಾಧ್ಯದೈವವಾಗಿದ್ದವನು (ನನಗೆ ಅದೇಕೋ ರಾಜಕುಮಾರನನ್ನು ‘ಡಾ.ರಾಜ್‍ಕುಮಾರ್ ಅವರು’ ಎಂದು ಬಹುವಚನದಲ್ಲಿ ಬರೆದರೆ ತುಂಬ ಕೃತಕವೆನಿಸುತ್ತದೆ, ಕ್ಷಮಿಸಿ). ನನ್ನ ಅಜ್ಜಿಗಂತೂ (ತಾಯಿಯ ತಾಯಿ) ರಾಜಕುಮಾರನೆಂದರೆ ಪ್ರಾಣ. ರಾಜಕುಮಾರ್ ಗುಬ್ಬಿಕಂಪನಿಯಲ್ಲಿದ್ದ ಸಮಯದಲ್ಲಿ ನಾಟಕ ಮಾಡಲು ಹುಬ್ಬಳ್ಳಿಗೆ ಬಂದಾಗ ನನ್ನ ಅಜ್ಜಿಯ ಮನೆಯ ಹತ್ತಿರವೇ ಇದ್ದನಂತೆ! ನನ್ನ ಅಜ್ಜಿಗೆ ರಾಜಕುಮಾರನು ರಾಜಕುಮಾರನಾಗುವ ಮೊದಲಿನಿಂದಲೂ ಗೊತ್ತು!! ರಾಜಕುಮಾರನ ಯಾವುದೇ ಸಿನೆಮಾ ಬಂದರೂ ನನ್ನ ಸೋದರಮಾವಂದಿರು ಫಸ್ಟ್‌ಡೇ ಲಾಸ್ಟ್‌ಶೋಗೆ ಅದೆಲ್ಲಿಂದಲೋ ಟಿಕೆಟ್ಟುಗಳನ್ನು ದಕ್ಕಿಸಿಕೊಂಡು (ರಾಜಕುಮಾರನ ಸಿನೆಮಾಗೆ ಮೊದಲದಿನದ ಟಿಕೇಟ್ ಸಿಗಲು ಪುರ್ವಜನ್ಮದಲ್ಲಿ ಪುಣ್ಯಮಾಡಿರಬೇಕು, ಹಾಗಿತ್ತು ಆಗ)  ಮನೆಮಂದಿಯನ್ನೆಲ್ಲ (ನನ್ನ ಅಜ್ಜಿಯನ್ನೂ ಸೇರಿಸಿ), ಅಜ್ಜಿಮನೆಗೆ ರಜೆಗೆ ಬಂದ ನಮ್ಮಂಥ ಪುಟ್ಟಮಕ್ಕಳನ್ನೆಲ್ಲ ಕಟ್ಟಿಕೊಂಡು ಹೊರಡುತ್ತಿದ್ದರು (ಒಟ್ಟು ಇಪ್ಪತ್ತು ಮೂವತ್ತು ಜನ ಇರುತ್ತಿದ್ದೆವು!). ಆಗ ಲಾಸ್ಟ್‌ಶೋ ರಾತ್ರಿ ಒಂಬತ್ತು ಗಂಟೆಗೆ ಇರುತ್ತಿತ್ತು; ಆಗಿನ ಕಾಲದಲ್ಲಿ ಒಂಬತ್ತು ಗಂಟೆ ಅಂದರೆ ಒಂಥರ ಅಪರಾತ್ರಿ ಇದ್ದಂತೆ, ಬರೀ ಗುರ್ಕಾಗಳು ಕುಡುಕರು ನಾಯಿಗಳು ಮಾತ್ರ ರಸ್ತೆ ಮೇಲೆ ಕಾಣಸಿಗುತ್ತಿದ್ದರು.ಸಿನೆಮಾ ಬಿಡುತ್ತಿದುದು ರಾತ್ರಿ ಹನ್ನೆರೆಡೋ ಹನ್ನೆರೆಡುವರೆಯೋ ಆಗುತ್ತಿತ್ತು. ಆಗ ಗವ್ ಎನ್ನುವ ಕತ್ತಲೆಯಲ್ಲಿ ಸೋದರ ಮಾವಂದಿರ ಕೈಹಿಡಿದು ನಾಯಿಗಳನ್ನು, ಕಡುಕರನ್ನು ದೂರದಿಂದಲೇ ಗಮನಿಸುತ್ತ, ನೋಡಿರುವ ರಾಜಕುಮಾರನ ಸಿನೆಮಾದ ಸಿನೆಮಾದ ಬಗ್ಗೆ ಭಯಂಕರ ಚರ್ಚೆ ಮಾಡಿಕೊಂಡು ಬರುತ್ತಿದ್ದೆವು. ಜೊತೆಗೆ ಆಗಾಗ ವಿಷ್ಣುವರ್ಧನ, ಅನಂತನಾಗ, ಶಂಕರನಾಗ, ಅಂಬರೀಷರ ಸಿನೆಮಾಗಳನ್ನೂ ನೋಡುತ್ತಿದ್ದೆವು. ಹುಬ್ಬಳ್ಳಿಯಲ್ಲಿ ಕನ್ನಡ ಸಿನೆಮಾಗಳಷ್ಟೇ ಹಿಂದಿ ಸಿನೆಮಾಗಳೂ ಸಿನೆಮಾಹಾಲುಗಳಿಗೆ ಬರುತ್ತಿದ್ದವು. ಹೀಗಾಗಿ ಅಮಿತಾಭ್, ಜಿತೇಂದ್ರರ ಹಿಂದಿ ಸಿನೆಮಾಗಳನ್ನೂ ಎಗ್ಗಿಲ್ಲದೇ ನೋಡುತ್ತಿದ್ದೆವು. 

ಮುಂದೆ ಎಂಬಿಬಿಎಸ್ ಮಾಡಲು ಹುಬ್ಬಳ್ಳಿಗೇ ಬಂದಾಗ ನನಗೆ ಸಿನೆಮಾ ಲೋಕಕ್ಕೇ ಬಂದಂತಾಯಿತು. ಕಾಲೇಜಿನ ಹತ್ತಿರವೇ ಇದ್ದ ಅಮೃತ ಥೇಟರಿನಲ್ಲಿ ಇಂಗ್ಲೀಷ್ ಸಿನೆಮಾ, ಸುಜಾತದಲ್ಲಿ ರಾಜಕುಮಾರನ ಸಿನೆಮಾ, ಚಂದ್ರಕಲಾದಲ್ಲಿ ರಾಜಕುಮಾರನ ಹಳೆಯ ಸಿನೆಮಾ, ಅಪ್ಸರಾ-ಸುಧಾ-ರೂಪಂನಲ್ಲಿ ಹಿಂದಿ ಸಿನೆಮಾ, ಮೋಹನ-ಮಲ್ಲಿಕಾರ್ಜುನದಲ್ಲಿ ಆರ್ಟ್ ಸಿನೆಮಾ, ಸಂಗೀತದಲ್ಲಿ ತೆಲುಗು ಸಿನೆಮಾ...ಒಟ್ಟಿನಲ್ಲಿ ಸಿನೆಮಾ ಸುಗ್ಗಿ. ಇಂಥದೇ ಸಿನೆಮಾ ಆಗಿರಬೇಕಿತ್ತು ಎಂದೇನೂ ಇರಲಿಲ್ಲ. ಒಂದಿನಿತೂ ಕಲೆಯಿಲ್ಲದ ಶುದ್ಧ ವ್ಯಾಪಾರಿಚಿತ್ರದಿಂದ ಹಿಡಿದು ಪ್ರಶಸ್ತಿಗೋಸ್ಕರವಾಗಿಯೇ ಮಾಡಿದ ಕಲಾತ್ಮಕ ಚಿತ್ರಗಳವರೆಗೆ ಯಾವುದಾದರೂ ನಡೆಯುತ್ತಿತ್ತು. ಧಾರವಾಡದಲ್ಲಿ ವರ್ಷಕ್ಕೊಮ್ಮೆ ಉತ್ತಮ ಕಲಾತ್ಮಕ ಚಿತ್ರಗಳ ಉತ್ಸವವನ್ನು ಮಾಡುತ್ತಿದ್ದರು. ಎಲ್ಲ ಸಿನೆಮಾ ಟಾಕೀಜುಗಳ ಮ್ಯಾಟ್ನಿಶೋದಲ್ಲಿ ಈ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದರು. ಸಮಯ ಮಾಡಕೊಂಡು ಅವನ್ನೂ ನೋಡುತ್ತಿದ್ದೆ. 

ವಯಸ್ಸಾದಂತೆ ಸಿನೆಮಾ ಹುಚ್ಚು ಕಡಿಮೆಯಾಗುತ್ತದಂತೆ, ಆದರೆ ಪಿಜಿ ಮಾಡಲು ಮೈಸೂರಿಗೆ ಬಂದಾಗ ಈ ಸಿನೆಮಾ ಹುಚ್ಚು ಕಡಿಮೆಯಾಗುವ ಬದಲು ಇನ್ನೂ ಹೆಚ್ಚೇ ಆಯಿತು. ಅದರಲ್ಲೂ ಕನ್ನಡ ಸಿನೆಮಾಗಳನ್ನು ನೋಡುವ ಹುಚ್ಚು ಇನ್ನೂ ಹೆಚ್ಚಾಯಿತು. ಎಷ್ಟೇ ಕೆಟ್ಟ ಕನ್ನಡ ಸಿನೆಮಾಗಳನ್ನು ನೋಡಿದರೂ ಛಲ ಬಿಡದ ತ್ರಿವಿಕ್ರಮನಂತೆ ಈ ಸಲವಾದರೂ ಒಳ್ಳೆಯ ಸಿನೆಮಾ ನೋಡಲು ಸಿಗುತ್ತದೆ ಎನ್ನುವ ಭ್ರಮೆಯಿಂದ ಇರುವ ಬರುವ ಕನ್ನಡ ಸಿನೆಮಾಗಳನ್ನು ನೋಡುತ್ತಿದ್ದೆ. ಹಳೆಯ ತಲೆಮಾರೆಲ್ಲ ಖಾಲಿಯಾಗಿ ಶಿವರಾಜಕುಮಾರ, ಉಪೇಂದ್ರ, ರಮೇಶ, ಸುದೀಪರೆಲ್ಲ ಬಂದಿದ್ದರು. ಹಿಂದಿಯನ್ನು ಖಾನ್‍ಗಳು ಆಳುತ್ತಿದ್ದರು. ಮೈಸೂರಿಗೆ ಎಲ್ಲ ಹಿಂದಿ ಸಿನೆಮಾಗಳು ಬರುತ್ತಿರಲಿಲ್ಲ, ಆದರೆ ಬರುವ ಸಿನೆಮಾ ಬಿಡುತ್ತಿರಲಿಲ್ಲ. ಸ್ಟರ್ಲಿಂಗ್‍ನಲ್ಲಿ ಬರುವ ಇಂಗ್ಲೀಷ್ ಸಿನೆಮಾಗಳನ್ನೂ ಬಿಡುತ್ತಿರಲಿಲ್ಲ. ಆದರೂ ಒಲವು ಮಾತ್ರ ಕನ್ನಡ ಮತ್ತು ಹಿಂದಿ ಸಿನೆಮಾಗಳದ್ದೇ. 

ಇಷ್ಟೊಂದು ಕನ್ನಡ ಮತ್ತು ಹಿಂದಿ ಸಿನೆಮಾ ಹುಚ್ಚಿರುವ ನಾನು ಇಂಗ್ಲೆಂಡಿಗೆ ಬಂದಾಗ ನೀರಿನಿಂದ ಆಚೆ ತೆಗೆದ ಮೀನಿನಂತೆ ಆಗಿದ್ದೆ. ಆಗಾಗ ಹಿಂದಿ ಸಿನೆಮಾಗಳನ್ನು ಥೇಟರಿನಲ್ಲಿ ನೋಡುವುದನ್ನು ಬಿಟ್ಟರೆ ಭಾರತದ ಯಾವ ಭಾಷೆಯ ಸಿನೆಮಾಗಳೂ ನೋಡಲು ಸಿಗುತ್ತಿರಲಿಲ್ಲ. ಕನ್ನಡ ಸಿನೆಮಾಗಳೊಂದೂ ಟಾಕೀಜಿಗೆ ಬರುತ್ತಿರಲಿಲ್ಲ. ಕನ್ನಡದ ಟಿವಿ ಚಾನೆಲ್‍ಗಳು ಇರಲಿಲ್ಲ. ಈ ಸಿನೆಮಾ ತಲುಬನ್ನು ನಿವಾರಿಸಿಕೊಳ್ಳುವ ಉಪಾಯಗಳೆಂದರೆ, ಭಾರತಕ್ಕೆ ರಜೆಗೆ ಹೋದಾಗ ಒಂದಿಪ್ಪತ್ತು ಕನ್ನಡ ಸಿನೆಮಾಗಳ ವಿಸಿಡಿ (ನಂತರ ಡಿವಿಡಿ)ಗಳನ್ನು ಹೊತ್ತು ತರುವುದು ಮತ್ತು ಗೆಳೆಯರ ಮನೆಗೆ ಹೋದಾಗ ವಿಸಿಡಿ, ಡಿವಿಡಿಗಳನ್ನು ವಿನಿಮಯಮಾಡಿಕೊಳ್ಳುವುದು. ಈ ವಿಸಿಡಿ, ಡಿವಿಡಿಗಳು 90% ಪೈರೇಟೆಡ್ ಆಗಿರುತ್ತಿದ್ದವಾದ್ದರಿಂದ ಸಿನೆಮಾಗಳ ಪ್ರಿಂಟ್ ಕ್ವಾಲಿಟಿ ತುಂಬ ಕೆಟ್ತದಾಗಿರುತ್ತಿದ್ದವು, ಅರ್ಧ ಮುಕ್ಕಾಲು ಆದ ಮೇಲೆ ಮುಂದೆ ಹೋಗಲು ತುಂಬ ಕಷ್ಟ ಪಡುತ್ತಿದ್ದವು, ಕೆಲವಂತೂ ಏನೆಲ್ಲ ಮಾಡಿದರೂ ಕರ್ ಕರ್ ಎಂದು ಸದ್ದು ಮಾಡುತ್ತ ನಿಂತುಬಿಡುತ್ತಿದ್ದವು. ಎಲ್ಲ ಸಿನೆಮಾ ಕತೆಗಳೂ ಒಂದ ತರಹ ಇರುವುದರಿಂದ ಮುಂದೆ ಏನಾಯಿತು, ಸಿನೆಮಾ ಹೇಗೆ ಅಂತ್ಯವಾಯಿತು ಎಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಅದು ಬೇರೆ ಮಾತು. 

ಹೀಗಿರುವಾಗ ಕನ್ನಡದ ಕೆಲವು ಸಂಘಗಳು ಕನ್ನಡ ಚಲನಚಿತ್ರಗಳನ್ನು ತರಿಸಿ, ಕನ್ನಡದ ಸಿನೆಮಾಗಳನ್ನು ಇಂಗ್ಲೆಂಡಿನ ಸಿನಿಮಾಹಾಲುಗಲಲ್ಲಿ ಬಿಡುಗಡೆ ಮಾಡಿದರು. ‘ರಾಮ, ಶ್ಯಾಮ, ಭಾಮ‘, ನಾನು ಇಂಗ್ಲೆಂಡಿನಲ್ಲಿ ಸಿನೆಮಾಹಾಲಿನಲ್ಲಿ ನೋಡಿದ ಮೊದಲ ಕನ್ನಡ ಸಿನೆಮಾ, ಆ ಚಿತ್ರ ಲಂಡನ್ನಿನ ಸಿನೆಮಾ ಟಾಕೀಜಿನಲ್ಲಿ ಹೌಸ್‍ಫುಲ್ ಆಗಿತ್ತು. ಕನ್ನಡದ ಯಾವುದೋ ಸಾಂಕೃತಿಕ ಕಾರ್ಯಕ್ರಮ ನಡೆಯುತ್ತಿರುವಂತೆ ಸಡಗರವಿತ್ತು. ಕರ್ನಾಟಕದಿಂದ ಸಿನೆಮಾ ತರಿಸಿ, ಅದಕ್ಕೆ ಇಂಗ್ಲೆಂಡಿನ ಸೆನ್ಸಾರ್ ಸರ್ಟಿಫಿಕೇಟ್ (ಆಗ ಇಂಗ್ಲೀಷ್ ಸಬ್‍ಟೈಟಲ್‍ಗಳು ಇರಲಿಲ್ಲ) ಕೊಡಿಸಿ, ಟಿಕೆಟ್ ಮಾರಿ, ಸಿನೆಮಾಹಾಲಿನ ಬಾಡಿಗೆಕೊಟ್ಟ ಮೇಲೆ, ಸಿನೆಮಾ ತರಿಸಿದವರಿಗೆ ಕೈಗೆ ಎಷ್ಟು ಮಿಕ್ಕುತ್ತಿತ್ತೋ ಅಥವಾ ಕೈಯಿಂದ ಅವರೇ ದುಡ್ಡು ಹಾಕಬೇಕಿತ್ತೋ ನನಗಂತೂ ಗೊತ್ತಿಲ್ಲ. ಆದರೆ ಕನ್ನಡ ಸಿನೆಮಾಗಳನ್ನು ನೋಡುವ ಅವಕಾಶ ಮಾತ್ರ ಹೆಚ್ಚುತ್ತ ಹೋಯಿತು. ಎಷ್ಟರ ಮಟ್ಟಿಗೆ ಎಂದರೆ ನೋಡಲು ಪುರುಸೊತ್ತು ಸಿಗುತ್ತಿರಲಿಲ್ಲ. ಆನಂತರ ಕನ್ನಡ ಸಿನೆಮಾಗಳು ಇಂಗ್ಲೀಷ್ ಸಬ್‍ಟೈಟಲ್‍ನೊಂದಿಗೆ ಹಾಲಿವುಡ್ ಮತ್ತು ಹಿಂದಿ ಸಿನೆಮಾಗಳಂತೆ ಮಲ್ಟಿಪ್ಲೆಕ್ಸುಗಳಲ್ಲಿ ಅಧೀಕೃತವಾಗಿ ಬಿಡುಗಡೆಯಾಗತೊಡಗಿದವು. ಗಣೇಶ, ದರ್ಶನ್, ಯಶ್‍ರ ಸಿನೆಮಾಗಳು ಇಲ್ಲೂ ವಿಜೃಂಭಿಸತೊಡಗಿದವು (ಈಗ ಕೊರೊನಾ ದೆಸೆಯಿಂದಾಗಿ ಇದೆಲ್ಲ ನಿಂತುಹೋಗಿದೆ, ಮತ್ತೆ ಪ್ರಾರಂಭವಾಗುವುದೇ? ಕಾದುನೋಡಬೇಕು). 

ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ಓಟಿಟಿಗಳು ಆರಂಭವಾದಾಗ ಅದರಲ್ಲಿ ಭಾರತೀಯ ಭಾಷೆಯ ಸಿನೆಮಾಗಳು ಇರಲಿಲ್ಲ, ಕನ್ನಡ ಸಿನೆಮಾಗಳಂತೂ ಇರಲೇ ಇಲ್ಲ. ಆದರೆ ಕೆಲವು ವೆಬ್‍ಸೈಟುಗಳು ಎಚ್.ಡಿ ಗುಣಮಟ್ಟದ ಕನ್ನಡ ಸಿನೆಮಾಗಳನ್ನು ಅವು ಕರ್ನಾಟಕದಲ್ಲಿ ಬಿಡುಗಡೆಯಾದ ಕೆಲವು ತಿಂಗಳುಗಳಲ್ಲೇ  ತಮ್ಮ ತಾಣಗಳಲ್ಲಿ ಬಿಡುಗಡೆ ಮಾಡತೊಡಗಿದವು, ಅದೂ ಪುಗಸಟ್ಟೆಯಾಗಿ ಅಥವಾ ತುಂಬ ಕಡಿಮೆ ದುಡ್ಡಿಗೆ. ಮನೆಯಲ್ಲೇ ಕೂತುಕೊಂಡು ಉತ್ತಮ ಪ್ರಿಂಟಿನ ಸಿನೆಮಾಗಳನ್ನು ನೋಡುವ ಅವಕಾಶ ಶುರುವಾಯಿತು. ಆದರೂ ಈ ವೆಬ್‍ಸೈಟುಗಳು ಎಲ್ಲಿ ವೈರಸ್ಸುಗಳನ್ನು, ವರ್ಮ್‍ಗಳನ್ನು ನಮ್ಮ ಕಂಪ್ಯೂಟರಿಗೆ ಬಿಡುತ್ತಾರೋ ಎಂದು ಹೆದರಿಕೆಯಾಗುತ್ತಿತ್ತು. ಅಲ್ಲದೇ ಕಂಪ್ಯೂಟರಿನಿಂದ ಟಿವಿಯ ಅಥವಾ ಹೋಮ್‍ಸಿನೆಮಾದ ಪರದೆಗೆ ಇವನ್ನು ಎಳೆದು ತರುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗುತ್ತಿತ್ತು. 

ಭಾರತೀಯ ಸಿನೆಮಾ ಮಾರುಕಟ್ಟೆಯ ಮೇಲೆ ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್‍ಗಳ ಕಣ್ಣು ಬೀಳಲು ತುಂಬ ಸಮಯವೇನೂ ಬೇಕಾಗಲಿಲ್ಲ. ಈಗ ಬಹುತೇಕ ಎಲ್ಲ ಹಿಂದಿ ಸಿನೆಮಾಗಳು ಓಟಿಟಿಯಲ್ಲಿ ನೋಡಲು ಸಿಗುತ್ತವೆ. ಹೊಸ ಕನ್ನಡ ಸಿನೆಮಾಗಳೂ ಪ್ರೈಮ್‍ನಲ್ಲಿ (ನೆಟ್‍ಫ್ಲಿಕ್ಸ್‍ನಲ್ಲಿ ತುಂಬ ಕಡಿಮೆ) ನೋಡಲು ಸಿಗುತ್ತವೆ. ಬರೀ ಹಿಂದಿ ಮತ್ತು ಕನ್ನಡ ಭಾಷೆಯ ಸಿನೆಮಾಗಲಲ್ಲದೇ ತೆಲುಗು, ತಮಿಳು, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ ಸಿನೆಮಾಗಳನ್ನೂ ಮನೆಯಲ್ಲೇ ಕೂತು, ಭಾಷೆ ಅರ್ಥವಾಗದಿದ್ದರೂ ಸಬ್‍ಟೈಟಲ್ ಓದಿಕೊಂಡು ನೋಡಬಹುದಾಗಿದೆ. ಶುದ್ಧ ವ್ಯಾಪಾರಿ ಸಿನೆಮಾಗಳಾದ ರಾಬರ್ಟ್, ಕೆಜಿಎಫ್‍ನಂಥ ಸಿನೆಮಾಗಳ ಜೊತೆಗೆ ನಾತಿಚರಾಮಿ, ಕಿರಗೂರಿನ ಗಯ್ಯಾಳಿಗಳಂಥ ಸೂಕ್ಷ್ಮಸಂವೇದನೆಯ ಸಿನೆಮಾಗಳನ್ನು ನಮಗೆ ಬೇಕಾದ ಹೊತ್ತು, ಎಲ್ಲಿ ಬೇಕಾದರೂ, ಫೋನಿನಿಂದ ಹಿಡಿದು ಹೋಮ್‍ಸಿನೆಮಾ ಪರದೆಯ ಮೇಲೆ ನೋಡಬಹುದಾಗಿದೆ. 

(ಕೆಂಡಸಂಪಿಗೆಯಲ್ಲಿ ಮೊದಲು ಪ್ರಕಟಿತ) .