Friday 17 November 2017

ಹನಿಗವನಗಳ ಹೆಜ್ಜೆ ಹಿಡಿದು

 (ನವೆಂಬರ್ ನಾಕರಂದು ನಡೆದ `ಕನ್ನಡ ಬಳಗ, ಯು.ಕೆ` ಕಾರ್ಯಕ್ರಮದ `ಹನಿವನ ಗೋಷ್ಠಿ`ಯಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಶ್ರೀ ಡುಂಡಿರಾಜರ ಸಮ್ಮುಖದಲ್ಲಿ ಭಾಷಣ ಮಾಡಿದ್ದು)

ಹನಿಗವನಗಳು ಪುಟ್ಟ ಪುಟ್ಟ ಸಾಲುಗಳ ಚಿಕ್ಕ ಚಿಕ್ಕ ಪದ್ಯಗಳು. ಹಾಗೆಂದು ಈ ಲಘುಗವನಗಳನ್ನು ಲಘುವಾಗಿ ಪರಿಗಣಿಸಬೇಕಾಗಿಲ್ಲ.

ಕೆಲವೇ ಕೆಲವು ಸಾಲುಗಳಲ್ಲಿ ತಿಳಿ ಹಾಸ್ಯವನ್ನೋ, ಒಂದು ಚಿತ್ರವನ್ನೋ, ಒಂದು ಗೊಂದಲವನ್ನೋ, ಆತಂಕವನ್ನೋ, ದ್ವಂದ್ವವನ್ನೋ, ಚಟಾಕೆಯನ್ನೋ, ಶಬ್ದದ ಮಾಂತ್ರಿಕತೆಯನ್ನೋ, ವಿಸ್ಮಯವನ್ನೋ, ಅನಿರೀಕ್ಷಿತ ಪ್ರಾಸವನ್ನೋ, ಶ್ಲೇಷ (ಪನ್)ಯನ್ನೋ ಮೂಡಿಸುವ ಹನಿಕವಿತೆಗಳು ಕನ್ನಡ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವೇ.

ಮುಕ್ತಕ, ಬಿಡಿಗವನ, ಹನಿಗವನ, ಹನಿಕವಿತೆ, ಚುಟುಕು ಎಂದೆಲ್ಲ ಹೆಸರಿನಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಇತ್ತೀಚೆ ಹುಟ್ಟಿಕೊಂಡಿದ್ದಲ್ಲ.

ಬೇರೆ ಭಾಷೆಗಳಲ್ಲಿ ಹನಿಗವನಗಳು:

ಜಗತ್ತಿನ ಪ್ರತಿ ಭಾಷೆಯಲ್ಲೂ ಹನಿಗವನಗಳು ಇರಲೇಬೇಕು. ಎರಡರಿಂದ ಆರು ಸಾಲುಗಳವರೆಗೆ ಪುಟ್ಟ ಮಕ್ಕಳಿಗೆ ಹಾಡಲು ಹನಿಗವನಗಳು ಇರದ ಭಾಷೆ ಇರಲು ಸಾಧ್ಯವೆ?.

ಸಂಸ್ಕೃತ ಸುಭಾಷಿತಗಳು ಅಥವಾ ದೇವರ ಸ್ತುತಿಗಳು ವ್ಯಾಕರನ ಬದ್ಧವಾಗಿ ಸಿಗುವ ಜಗತ್ತಿನ ಮೊಟ್ಟಮೊದಲ ಹನಿಕವಿತೆಗಳಿರಬಹುದು ಎಂದು ನನ್ನ ಊಹೆ..

`यस्यास्ति वित्तं स नर:कुलीन: स पण्डित: स श्रुतवान् गुणज्ञाम्प;: |
स एव वक्ता स च दर्शनीय: सर्वे गुणा: काञ्चनमाश्रयन्ते ||`

(ಯಾರಲ್ಲಿ ವಿತ್ತವಿದೆಯೋ ಅವನೇ ನರಕುಲೀನ, ಅವನೇ ಪಂಡಿತ, ಅವನೇ ಶ್ರುತವಾನ್ ಗುಣಜ್ಞ
ಅವನೇ ವಾಗ್ಮಿ, ಅವನೇ ಸುಂದರ – ಎಲ್ಲ ಗುಣಗಳೂ ಕಾಂಚನವನ್ನು ಆಶ್ರಯಿಸುತ್ತವೆ)

ಎನ್ನುವ ಈ ಸುಭಾಷಿತ ಎರಡೇ ಸಾಲುಗಳಲ್ಲಿ ಏನೆಲ್ಲ ಹೇಳಿಬಿಡುತ್ತದಲ್ಲವೇ?

ಮೂರೇ ಸಾಲುಗಳಲ್ಲಿ ಒಂದು ಪ್ರಕೃತಿಯ ಚಿತ್ರವನ್ನೂ ಮನಸಿನ ಭಾವವನ್ನೂ ಏಕಕಾಲದಲ್ಲಿ ಚಿತ್ರಿಸುವ ಜಪಾನಿನ `ಹೈಕು`ಗಳಿಗೆ ಮಾರುಹೋಗದ ಹೈಕಳಿಲ್ಲ. ೫-೭-೫ ಉಚ್ಚಾರಗಳ (syllables) ಮೂರು ಸಾಲುಗಳು ಬಹುಷಃ ಪ್ರಪಂಚದ ಅತಿ ಚಿಕ್ಕ ಹನಿಗವನಗಳಿರಬಹುದು. ಜಪಾನಿನ ಉಚ್ಚಾರದ ಛಂದಸ್ಸನ್ನು ಇಂಗ್ಲೀಷಿಗಾಗಲಿ ಕನ್ನಡಕ್ಕಾಗಲಿ ತರುವುದು ತುಂಬ ಕಷ್ಟ.

古池
蛙飛び込む
水の音

(ಫುರು ಇಕೆ ಯಾ
ಕವಝು ತೊಬಿಕೊಮು
ಮಿಝು ನೊ ಒತೊ

ಹಾ! ಹಳೆ ಕೆರೆ
ಕಪ್ಪೆಯು ಜಿಗಿಯಲು
ನೀರಿನ ಧ್ವನಿ)

`ಇಂಗ್ಲೀಷಿನ ಲಿಮಿರಿಕ್ಕುಗಳು ಐದು ಸಾಲಿನ ಪುಟ್ಟ ಕವನಗಳು. ಹೆಚ್ಚು ಮಟ್ಟಿಗೆ ತಮಾಷೆಯನ್ನೇ ಬಿಂಬಿಸುವ ಕವನಗಳು.

“Hickory, dickory, dock,
The mouse ran up the clock.
The clock struck one,
And down he run,
Hickory, dickory, dock.”

ಎನ್ನುವ ನರ್ಸರಿ ಪದ್ಯ ಕೇಳದವರುಂಟೆ?

ಹಿಂದಿಯಲ್ಲಿ ಉರ್ದುವಿನಲ್ಲಿ ಹನಿಕವನ ಸಾಹಿತ್ಯವೆಂದರೆ ಎರಡು ಸಾಲುಗಳಲ್ಲಿ ಹಾಸ್ಯವನ್ನು, ದುಃಖವನ್ನು, ನೆನಪನ್ನು, ವಿರಹವನ್ನು, ಪ್ರೇಮವನ್ನು ಹೇಳುವ ಶಾಯರಿಗಳು.

होश वालों को ख़बर क्या बेख़ुदी क्या चीज़ है
इश्क़ कीजे फिर समझिये ज़िन्दगी क्या चीज़ है

(ಶ್ಯಾಣ್ಯಾ ಮಂದಿಗೇನ್ ಗೊತ್ತು ಹುಚ್ಚತನ ಅಂದ್ರೇನಂತ
ಪ್ರೀತ್ಯಾಗ್ ಬೀಳ್ರಿ ಮತ್ತ ತಿಳ್ಕೋರ್ರಿ ಜೀವನ ಅಂದ್ರೇನಂತ)

ಎನ್ನುವ ವಿರುದ್ಧ ಅರ್ಥಗಳ ಸಾಲುಗಳಿಗೆ ಮಾರುಹೋಗದವರಾರು?

ಹೀಗೆ ನೋಡುತ್ತ ಹೋದರೆ ಪ್ರತಿ ಭಾಷೆಯಲ್ಲೂ ಹನಿಗವನಗಳು ಸಿಗುತ್ತವೆ.

ಕನ್ನಡದಲ್ಲಿ ಹನಿಗವನದ ಇತಿಹಾಸ:

ಕನ್ನಡದಲ್ಲಿ ಹನಿಗವನಗಳ ಉಗಮ ಮಕ್ಕಳನ್ನು ಆಡಿಸುವ ಮಾತೆಯರ ಮಾತುಗಳಿಂದಲೇ ಎನ್ನುವುದರಲ್ಲಿ ನನಗಂತೂ ಸಂಶಯವಿಲ್ಲ.

`ಆನಿ ಬಂತೊಂದಾನಿ
ಇದ್ಯಾ ಊರ ಆನಿ
ವಿಜಾಪುರದ ಆನಿ
ಇಲ್ಲಿಗ್ಯಾಕ ಬಂತು
ಹಾದಿ ತಪ್ಪಿ ಬಂತು
ಹಾದಿಗೊಂದು ದುಡ್ಡು
ಬೀದಿಗೊಂದು ದುಡ್ಡು`

ಎಂದು ಮಗುವನ್ನು ತೊಡೆಯ ನಡುವೆ ಮಲಗಿಸಿ, ಗಲ್ಲ ತಟ್ಟುತ್ತ, ಚಿಟಿಕೆ ಹೊಡೆಯುತ್ತ ನಗಿಸುವ ಇಂಥ ಪುಟ್ಟ ಹಾಡುಗಳು ಕನ್ನಡದ ಹನಿಗವನದ ಉದಾಹರಣೆಗಳು.

ಬಹುಷಃ ಕನ್ನಡದ ಪ್ರಕಟಿತ ಮೊಟ್ಟಮೊದಲ ಹನಿಗವನ ಸಾಹಿತ್ಯ ಸಿಗುವುದು ಶಿಲಾಶಾಸನಗಳಲ್ಲಿ.

`ಸಾಧುಂಗೆ ಸಾಧುಂ ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುವ ವಿಪರೀತನ್
ಮಾಧವನೀತನ್ ಪೆರನಲ್ಲ`

ಎನ್ನುವ ಚಲುಕ್ಯರ (ಇದನ್ನು ಚಾಲುಕ್ಯರು ಎಂದು ಬರೆಯುವುದು ವಾಡಿಕೆ) ಕಾಲದ ಶಾಸನ ಇದಕ್ಕೊಂದು ನಿದರ್ಶನ.

ಕನ್ನಡದ ಕಂದ ಪದ್ಯಗಳು ಕೂಡ ಹನಿಕವಿತೆಗಳೇ. ಕನ್ನಡದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲ ಕೃತಿ `ಕವಿರಾಜಮಾರ್ಗ`ದಲ್ಲೇ ಕಂದಪದ್ಯಗಳಿಲ್ಲವೇ?

ಕನ್ನಡ ಜನಪದ ತ್ರಿಪದಿಗಳು ಕನ್ನಡ ಸಾಹಿತ್ಯದ ಸುಂದರ ಹನಿಗವಿತೆಗಳ ತವರು:

“ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದವ್ವ ಒಳ ಹೊರಗ ಆಡಿದರ
ಬೀಸಣಿಗಿ ಗಾಳಿ ಸುಳಿದಾವ”

ಸರ್ವಜ್ಞನ ವಚನಗಳು ಇದೇ ತ್ರಿಪದಿಯ ಸಾಲುಗಳಲ್ಲಿ ಬರೆದ ತತ್ತ್ವಶಾಸ್ತ್ರದ ಕಿರು ಪದ್ಯಗಳು:

`ಬೆಚ್ಚನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿಯಿರಲು। ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ॥`
೧೨ನೇ ಶತಮಾನದ ಆಚೆ ಈಚೆ ಬರೆದ ಶರಣರ ವಚನಗಳು ಕೂಡ ಹನಿಕವಿತೆಗಳೇ:

`ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮ ದೇವರ ನೊಲೆಸುವ ಪರಿ`

ಎಂದು ಬಸವಣ್ಣನವರು ಕೆಲವೇ ಕೆಲವು ಸಾಲುಗಳಲ್ಲಿ ಅಗಾಧ ಕಾವ್ಯವನ್ನೇ ತುಂಬುತ್ತಾರೆ.

ಮುಂದೆ ವೈಷ್ಣವ ಪಂಥದ ದಾಸರು ಕೀರ್ತನಗಳನ್ನು ಹಾಡಿದರೂ ಉಗಾಭೋಗಗಳೆಂಬ ಸಣ್ಣ ಹಾಡುಗಳನ್ನು ಬರೆದರು:

`ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!`

ಇಂಥ ಧೀರ್ಘ ಇತಿಹಾಸವಿರುವ ಹನಿಗವನ ಸಾಹಿತ್ಯವನ್ನು ವಿಮರ್ಶಕರು ಲಘುವಾಗಿ ಕಾಣುತ್ತಾರೆ. ಹನಿಗವನಗಳು ಅರ್ಥವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುವ ಕಾರಣಕ್ಕೆ ವಿಮರ್ಶಕರಿಗೆ ಹೆಚ್ಚಿಗೆ ಹೇಳಲು ಏನೂ ಇರುವುದಿಲ್ಲ ಅನ್ನುವುದೂ ಒಂದು ಕಾರಣವಿರಬಹುದು.

ಹೊಸಕನ್ನಡದಲ್ಲಿ ಹನಿಗವನಗಳು:

ಹೊಸ ಕನ್ನಡದಲ್ಲಿ ಮೊಟ್ಟಮೊದಲು ಚುಟುಕು ಸಾಹಿತ್ಯದ ಪುಸ್ತಕವನ್ನ್ನು ಹೊರತಂದವರು ಜಿ ಪಿ ರಾಜರತ್ನಂ ಇರಬೇಕು. ೧೯೪೦ ರಲ್ಲಿ ಪ್ರಕಟಗೊಂಡ `ನೂರು ಪುಟಾಣಿ; ಬಹುಷಃ ಕನ್ನಡ ಪ್ರಪ್ರಥಮ ಹೊಸಗನ್ನಡದ ಚುಟುಕು ಸಂಕಲನ.

ಆದರೂ ಹನಿಗವನ ಸಾಹಿತ್ಯಕ್ಕೆ ಮೊಟ್ಟಮೊದಲು `ಚುಟುಕು` ಎನ್ನುವ ಶಬ್ದವನ್ನು ಕೊಟ್ಟ ಇತಿಹಾಸ ನನಗೆ ಸಿಗಲಿಲ್ಲ!

ಮುಕ್ತಕಗಳು ಎಂದು ಕರೆದಿರುವ ಡಿ ವಿ ಜಿವಯರ `ಮಂಕುತಿಮ್ಮನ ಕಗ್ಗ` ಮತ್ತು `ಮರಳುಮುನಿಯನ ಕಗ್ಗ` ಸಂಕಲನಗಳು ಬಿಡಿ-ಚಿಕ್ಕ ಪದ್ಯಗಳ ಸಂಕಲನಗಳೇ! ಇಲ್ಲಿನ ಆದಿಪ್ರಾಸವನ್ನು ಗಮನಿಸಬೇಕು.

`ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು


ಕನ್ನಡ ಪ್ರಸಿದ್ಧ ಕವಿಗಳೆಲ್ಲ ಹನಿಗವನ ಬರೆದವರೇ. `ರಾಮಾಯಣ ದರ್ಶನ` ಮಹಾಕಾವ್ಯ ಬರೆದಿರುವ ಕುವೆಂಪು ಅವರ `ಮಂತ್ರಾಕ್ಷತೆ` ಕವನ ಸಂಕಲನದಲ್ಲಿ ೧೧೭ ಬಿಡಿಗವನಗಳಿವೆಯಂತೆ!ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ`

ಹತ್ತು ಸಾವಿರಕ್ಕೂ ಹೆಚ್ಚು ಚೌಪದಿ ಬರೆದಿರುವ ದಿನಕರ ದೇಸಾಯಿಗೆ ಚುಟುಕ ಬ್ರಹ್ಮನೆಂದೇ ಕರೆದಿದ್ದಾರೆ. ಮುಖ್ಯವಾಗಿ ರಾಜಕೀಯವನ್ನು ವಿಡಂಬಣೆ ಮಾಡುತ್ತ ದಿನ ನಿತ್ಯದ ಆಗುಹೋಗುಗಳಿಗೆ ನಾಕುಸಾಲಿನ ಪುಟ್ಟಪದ್ಯಗಳಲ್ಲಿ ಸಾಹಿತ್ಯ ಬರೆದರು:

`ಕಲ್ಲಿಗೂ ದೃಢವಾಗಿ ಮನುಜ ಸಂಕಲ್ಪ |
ಹೂವಾಗಿ ಅರಳಿದರೆ ಗೊಮ್ಮಟನ ಶಿಲ್ಪ |
ಉಕ್ಕಿಗೂ ಬಿರುಸಾಗಿ ಮಾನವನ ಹೃದಯ |
ಬೆಣ್ಣೆಯೊಲು ಕರಗಿದರೆ ಗೌತಮನ ಉದಯ |`

ಪ್ರಜಾವಾಣಿಯ ಸಂಪಾದಕರಾಗಿದ್ದ ವೈ ಎನ್ ಕೆಯವರದು ಇಂಗ್ಲೀಷ್ ಮತ್ತು ಕನ್ನಡ ಎರಡು ಭಾಷೆಗಳ ಜೊತೆ ಆಡುತ್ತ, ಪದಗಳನ್ನು ಮುರಿಯುತ್ತ, ಶ್ಲೇಷೆ (ಪನ್)ಗಳನ್ನು ಹುಡುಕುತ್ತ ಚುಟುಕುಗಳನ್ನು ನಿರ್ಮಿಸಿದರು:

`ಕವಿತೆ,
ನೀನೇಕೆ ಪದಗಳಲಿ
ಅವಿತೆ?`

ಎಂದು ಕವಿತೆಗೇ ಪ್ರಶ್ನೆ ಹಾಕಿದರು.

ಲಂಕೇಶ ಪತ್ರಿಕೆಯ ಜಾಗಗಳನ್ನು ತುಂಬಲು, ಲಂಕೇಶರು `ನೀಲು` ಎನ್ನುವ ಹೆಸರಿನಲ್ಲಿ ಸಣ್ಣ ಪದ್ಯಗಳನ್ನು ಬರೆದರು. ಅವುಗಳನ್ನು `ನೀಲುಗಳು` ಎಂದೇ ಕರೆದು ನೀಲು-ಸಂಕಲನಗಳನ್ನು ಹೊರತಂದಿದ್ದಾರೆ. ಲಂಕೇಶರ ಹನಿಗವನಗಳಲ್ಲಿ ಪ್ರಾಸ, ಛಂದಸ್ಸುಗಳಿಲ್ಲ. ವಾಕ್ಯವನ್ನು ತುಂಡರಿಸಿ ಬರೆದಂತಿರುವ ಸಾಲುಗಳು ಕೆಲವೊಮ್ಮೆ ಅಗಾಧ ಅರ್ಥವನ್ನು ಹೊಮ್ಮಿಸುತ್ತವೆ.

ಕನ್ನಡದ ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಚುಟುಕುಗಳಿಗೆ ವಿಶಿಷ್ಟ ಜಾಗವಿದೆ. ಪ್ರತಿವಾರ ಹತ್ತಾರು ಚುಟುಕುಗಳು ಪ್ರತಿ ಪತ್ರಿಕೆಯನ್ನು ತುಂಬುತ್ತವೆ.

ಡುಂಡಿರಾಜರು ಹನುಗವನಗಳ ರಾಜನೆಂದೇ ಹೇಳಬಹುದು. ಅವರು ಬರೆದ ಕೆಲವು ಹನಿಗವಿತೆಗಳು ಕನ್ನಡಿಗರ ಬಾಯಲ್ಲಿ ಬಾಯಿಪಾಠ. ಅವರು `ಹನಿಗಾರಿಕೆ` ಎಂದು ಹನಿಗವನಗಳಿಗೆ ಹೊಸ ಶಬ್ದೋತ್ಪತ್ತಿ ಮಾಡಿದ್ದಾರೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಸಂಸಾರಗಳು ಇವರ ಮೆಚ್ಚಿನ ವಸ್ತುಗಳು.

`ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು`

ಎಂದು ಮೂರೇ ಸಾಲುಗಳಲ್ಲಿ ಧಸಕ್ಕೆಂದು ಬರುವ ಅನಿರೀಕ್ಷಿತ ಪ್ರಾಸದಿಂದ ನಮ್ಮನ್ನು ನಗಿಸಿಬಿಡುತ್ತಾರೆ.

ಹನಿಗವನಗಳ ವರ್ತಮಾನ/ಭವಿಷ್ಯ:

ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ಕವನಗಳನ್ನು ಓದಲು ಯಾರಿಗೂ ಪುರುಸೊತ್ತಿಲ್ಲ. ಕ್ಲಿಷ್ಟದ ಕವಿತಗಳನ್ನು ಎರಡೆರಡು ಸಲ ಓದುವ ತಾಳ್ಮೆ ಇರುವವರು ಕಮ್ಮಿ. ಹನಿಗವನಗಳು ಈಗಿನ ಸ್ಮಾರ್ಟ್ ಫೋನಿನ ಕಾಲದಲ್ಲಿ, ಸೋಶಿಯಲ್ ಮೀಡಿಯಾದ ಜಗತ್ತಿನಲ್ಲಿ ತುಂಬ ಚೆನ್ನಾಗಿ ಒಗ್ಗುತ್ತವೆ. ಅವಕ್ಕೆ ಎಸ್ಸೆಮ್ಮೆಸ್ ಕವನಗಳು, ಟ್ವಿಟರ್ ಚುಟುಕುಗಳು, ಫೇಸ್-ಬುಕ್ ಕವನಗಳು, ಇನ್ಸ್ಟಾಗ್ರಾಮ್ ಕವಿತೆಗಳು, ಟಂಬ್ಲರ್ ಸಾಲುಗಳು ಎಂದೆಲ್ಲ ಕರೆದರೂ ತಪ್ಪಿಲ್ಲ.

ಇಷ್ಟೆಲ್ಲ ಬರೆದ ಮೇಲೆ ನನ್ನದೊಂದು ಹನಿಗವನದಿಂದ ಈ ಲೇಖನವನ್ನು ಮುಗಿಸದಿದ್ದರೆ ಆದೀತೆ?

ಭಾರತಕ್ಕೂ ಇಂಗ್ಲಂಡಿಗೂ
ಏನು ಅಂತರ?
ಭಾರತದಾಗ ನೀರ
ಇಂಗ್ಲಂಡದಾಗ ಪೇಪರ

ಗ್ರಂಥಋಣ:
ಸುಬ್ರಮ್ರಣ್ಯ ನಾರಾಯಣ ಹೆಗಡೆ. `ಕನ್ನಡದಲ್ಲಿ ಚುಟುಕು ಸಾಹಿತ್ಯ`: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೨೦೦೯

Sunday 10 September 2017

Movie: Kannada: Rama Rama Re


You are about to be hanged. You manage to escape from the jail. You land in a jeep to escape to an unknown destiny. You come to know that the driver is a hangman, who is driving the jeep to a nearby police station. You come to know that the hangman knows you are a fugitive. What will you do? 
You are in a battlefield. You have two options: throw the bow and arrow and surrender and they will kill you OR pick up the bow and arrow and destroy your cousins and relatives. Krishna intervenes and advises Arjuna and Arjuna makes his decision. 

Our fugitive also listens to Krishna during the rollercoaster jeep ride with the hangman and makes his decision too. 

It is like running away from something to get rid of it, but coming back to where started. Call it karma or fate, it all means the same.

(The movie is available to watch free on YouTube). 

Friday 3 February 2017

ಸಿನೆಮಾ: ಕನ್ನಡ: ಕಿರಿಕ್ ಪಾರ್ಟಿ



೧೯೮೭: ನಾನಿನ್ನೂ ಕಾಲೇಜಿಗೆ ಕಾಲಿಟ್ಟಿರಲಿಲ್ಲ. 

`ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡೋ`, `ಚಲುವೆ ಒಂದು ಕೇಳ್ತೀನಿ, ಇಲ್ಲ ಅಂದೇ (ಅನ್ನದೇ ಅಲ್ಲ) ಕೊಡ್ತೀಯಾ?`, `ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ`, ಎಂದು ಮಾತಾಡುವಂಥ ವಾಕ್ಯಗಳ ಹಾಡು ಕಿವಿಗೆ ಬಿದ್ದವು. ಚಿ ಉದಯ ಶಂಕರ್ ಅವರ ಸರಳಿತ ಸುಲಲಿತ, ವಿಜಯ ನಾರಸಿಂಹ ಅವರ ಕ್ಲಿಷ್ಟಪದಗಳ ಹಾಡುಗಳನ್ನು ಕೇಳಿ ಬೆಳೆದ ನನಗೆ ಮೊದಮೊದಲು ಸ್ವಲ್ಪ ಕಸಿವಿಸಿಯೇ ಆಯಿತು. We all resist change. ಆದರೆ ಸ್ವಲ್ಪೇ ದಿನಗಳಲ್ಲಿ ಹಾಡುಗಳು ಹುಚ್ಚು ಹಿಡಿಸಿದವು, ಬಾಯಿಪಾಠ ಆದವು. ಹೊಸಪರಿಭಾಷೆಯ ಸಾಹಿತ್ಯ ಮತ್ತು ಸಂಗೀತದ ಹೊಸತನ, ಮಲಗಿದ್ದ ಕನ್ನಡ ಚಿತ್ರಸಂಗೀತವನ್ನು ಬಡಿದೆಬ್ಬಿಸಿತು. ಇನ್ನೂ ಕಾಲೇಜಿನ ಮೆಟ್ಟಿಲು ಹತ್ತಿಲ್ಲದಿದ್ದರೂ ಕಾಲೇಜಿಗೆ ಹೋಗುವ ಅಣ್ಣ ಇದ್ದ, ಬಳಗದ ಜನ ಇದ್ದರು, ಗೆಳೆಯರ ಅಣ್ಣ ತಂಗಿಯರಿದ್ದರು. ಎಲ್ಲರ ಬಾಯಲ್ಲೂ `ಪ್ರೇಮಲೋಕ`ದ ಹಾಡುಗಳೇ. ಈ ಸಿನೆಮಾ ಮಹತ್ವದ್ದಾಗುವುದು ಬರೀ ಹಾಡುಗಳಿಂದಲ್ಲ. ಹಾಡುಗಳ ಮೂಲಕ ಸಿನೆಮಾದ ಕತೆ ಹೇಳುವ, ಕಾಲೇಜು ಬದುಕಿನ ಪ್ರೇಮವನ್ನು ಪಡ್ಡೆ ಹುಡುಗರ ದೃಷ್ಟಿಯಿಂದ ತೋರಿಸಿತು. ಸಿನೆಮಾ ಯಾವಾಗ ನಮ್ಮೂರಿಗೆ ಬರುತ್ತೋ ಎಂದು ಕಾದಿದ್ದೇ ಕಾದಿದ್ದು. ಪ್ರೇಮಲೋಕ ಕನ್ನಡ ಕಮರ್ಷಿಯಲ್ ಚಿತ್ರದ ಒಂದು ಮಹತ್ವದ ಮೈಲುಗಲ್ಲಾಯಿತು. ಕಾಲೇಜ್ ಲೈಫನ್ನು ಬೆಳ್ಳಿಪರದೆ ಮೇಲೆ ಅಜರಾಮರವಾಗಿಸಿತು. ತುಂಡುಲಂಗದ ಜೂಹಿ ಚಾವ್ಲಾ ಹುಡುಗರ ಎದೆಯಲ್ಲಿ ಭದ್ರವಾದರು. ತುಟಿಗೆ ತುಟಿಯಿಟ್ಟು ಮುತ್ತನಿತ್ತು ಹುಡುಗರಿಗೆ ಹುಚ್ಚುಹಿಡಿಸಿದರು. 

೨೦೧೬-೨೦೧೭: ಫಾಸ್ಟ್ ಪಾರ್ವರ್ಡ್ ೨೦ ಇಯರ್ಸ್. 

`ಬೆಳಗೆದ್ದು ಯಾರ ಮುಖವ ನಾನು ನೋಡಿದೆ`, `ಸಾರ್, ತಿರ್ಬೋಕಿ ಜೀವನಾ ನಮ್ಮದಲ್ಲ`, ಎನ್ನುವ ಹಾಡುಗಳು ಕನ್ನಡಿಗರ ಫೋನುಗಳಲ್ಲಿ ಗುಣಗುಣಿಸುತ್ತಿದೆ. ಈಗ ಕೆಲ ವರ್ಷದಿಂದ ಯೋಗರಾಜ ಭಟ್ಟರು ಕನ್ನಡ ಹಾಡುಗಳನ್ನು ಬರೆಯುವ ಶೈಲಿಯನ್ನೇ ಬದಲಾಯಿಸಿದರು (ಹಳೆಪಾತ್ರೆ ಹಳೆಕಬಣ ಹಳೆ ಪೇಪರ್ ತರ ಹೋಯಿ). ಅಲ್ಲಿಂದ ಶುರುವಾದ ಟ್ರೆಂಡು `ಕಿರಿಕ್ ಪಾರ್ಟಿ`ಯಲ್ಲಿ ಮುಂದುವರೆದಿದೆ. 

ಮತ್ತೆ ಕಾಲೇಜು ಲೈಫು. ಮತ್ತೊಂದು ಪ್ರೇಮಲೋಕ ಎಂದುಕೊಂಡರೆ ಅದು ಶುದ್ಧ ಸುಳ್ಳು. ಇಲ್ಲಿ ಪ್ರೇಮವಿದೆ, ಆದರೆ ಅದೇ ಮುಖ್ಯ ಎಳೆ ಅಲ್ಲ. ಇಂಜಿನಿಯರಿಂಗ್ ಕಾಲೇಜಿದೆ ಎಂದ ಮಾತ್ರಕ್ಕೆ `ಥ್ರಿ ಇಡಿಯಟ್ಸ್` ನ ನಕಲು ಆಗಿಲ್ಲ. ಹುಡುಗಿಯರು ತುಂಡುಲಂಗ ಹಾಕುವುದಿಲ್ಲ, ಎದೆಸೀಳು ತೋರಿಸುವುದಿಲ್ಲ. ತುಟಿಗೆ ತುಟಿಯಿಟ್ಟು ಮುತ್ತನಿಡುವುದಿಲ್ಲ. ಆದರೆ ಸಿನೆಮಾ ಬಾಕ್ಸಾಫೀಸನ್ನು ದೋಚುತ್ತಿದೆ. ಇಪ್ಪತ್ತು ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ! 

ಮಲಯಾಳಂನಲ್ಲಿ ಕಾಲೇಜ್ ಜೀವನದ ಬಗ್ಗೆ ಅದ್ಭುತ ಸಿನೆಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಸುಮಾರು ಸಿನೆಮಾಗಳು ಕನ್ನಡಕ್ಕೂ ಬಂದಿದೆ. `ಅಟೋಗ್ರಾಫ್`, `ಪ್ರೇಮಂ` ಉದಾಹರಣೆಗಳು. `ಕಿರಿಕ್ ಪಾರ್ಟಿ` ಅದಕ್ಕೊಂದು ಉತ್ತರ ಕೊಟ್ಟಿದೆ. ಯಾವುದೇ ಬೋಧನೆ ಅಥವಾ ಉಪದೇಶದ ಹಂಗಿಲ್ಲದೇ ಒಂದು ದೊಡ್ಡ ಸೋಷಿಯಲ್ ಮೆಸೇಜನ್ನು ಹುಳ ಬಿಡುತ್ತದೆ ಈ ಚಿತ್ರ. 

ನಗಿಸುತ್ತ, ಎಪಿಸೋಡಿಕ್ ಆಗಿ ಕತೆ ಹೇಳುತ್ತ, ಎರಡೂವರೆ ಗಂಟೆ ಕಾಲೇಜು ಮತ್ತು ಕಾಲೇಜ್ ಹಾಸ್ಟೇಲಿನಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ. ಈ ಲಾಸ್ಟ್ ಬೆಂಚ್ ಹುಡುಗರು ಮಾತೆತ್ತಿದರೆ ಕುಡಿಯುತ್ತಾರೆ, ಸೇದುತ್ತಾರೆ, ಬ್ಯಾಟು-ಸ್ಟಂಪು ಹಿಡಿದು ಹೊಡೆದಾಡಿಕೊಳ್ಳುತ್ತಾರೆ, ಸಸ್ಪೆಂಡಾಗುತ್ತಾರೆ, ಫೇಲಾಗುತ್ತಾರೆ, ಆನ್ಸರ್ ಪತ್ರಿಕೆಯನ್ನೇ ಕದ್ದು ಹಾಸ್ಟೇಲಿನಲ್ಲಿ ಕುಡಿಯುತ್ತ ಸೇದುತ್ತ ಜ್ಯೂನಿಯರುಗಳನ್ನು ಜಾನುವಾರುಗಳಂತೆ ಅಳಿಸುತ್ತ ಉತ್ತರ ಬರೆಯುತ್ತಾರೆ. ಆದರೆ ಈ ಹುಡುಗರ ಬಗ್ಗೆ ಯಾರೂ ಒಂದೇ ಒಂದು ಕೆಟ್ಟ ಮಾತು ಹೇಳುವುದಿಲ್ಲ. ಆದರೆ ಹುಡುಗಿ, ಕುಡಿದು ಕುಣಿಯುತ್ತ ಅಕಸ್ಮಾತ್ತಾಗಿ ಬಿದ್ದು ಸತ್ತರೆ ಆ ವೀಡಿಯೋ ಮನೆ ಮನೆಯನ್ನೂ ತಲುಪಿ ಹುಡುಗಿಯ ಜನರ ಬಾಯಿಚಪಲದ ವಸ್ತುವಾಗುತ್ತಾಳೆ. ತಂದೆಯ ಕಣ್ಣಲ್ಲಿ ಮಗಳು ನಿಷ್ಕೃಷ್ಟವಾಗುತ್ತಾಳೆ. 

ಬದಲಾಗುತ್ತಿರುವ ಸಮಾಜಕ್ಕೆ, ಎಲ್ಲರ ಕೈಯಲ್ಲಿ ಮೊಬೈಲ್ ಇರುವ ಜನಾಂಗಕ್ಕೆ ಈಗ ಮನರಂಜನೆ ಎಂದರೆ ಮರ ಸುತ್ತಿ ಕುಣಿಯುವ ಹಾಡುಗಳಲ್ಲ, ತುಂಡುಲಂಗದ ಹುಡುಗಿಯರಲ್ಲ, ಕ್ಯಾಬರೆಗಳಲ್ಲ. ಒಂದು ಚಿಕ್ಕ ಕತೆ, ಚಂದದ ಚಿತ್ರಕತೆ, ಅದಕ್ಕೊಪ್ಪುವ ಹಾಡುಗಳು, ಒಂದಿಷ್ಟು ನಗು, ಸ್ವಲ್ಪವೇ ಅಳು, ದಿನಾ ಮಾತಾಡುವಂಥ ಸಂಭಾಷಣೆ, ಸುಪ್ತವಾಗಿ ಹರಿಯುವ ಒಂದು ಮೆಸೇಜು ಇದ್ದರೆ ಜನ ಸಿನೆಮಾ ಹಾಲಿಗೆ ಬರುವಂತೆ ಮಾಡಬಹುದು ಎನ್ನುವುದಕ್ಕೆ ಈ ಸಿನೆಮಾ ಉದಾಹರಣೆ. 

ಈ ಸಿನೆಮಾ ಏನು ಧಿಡೀರ್ ಎಂದು ಆದದ್ದಲ್ಲ. ಇದೇ ರಕ್ಷಿತ್ `ಉಳಿದವರು ಕಂಡಂತೆ` ಎನ್ನುವ `ರೋಶೋಮಾನ್` ತರಹದ ಸಿನೆಮಾ ಮಾಡಿದವರು. ಈ ಸಿನೆಮಾ, ಕಾಲೇಜು ಬರೀ ಪ್ರೇಮಿಸುವುದನ್ನು ಕಲಿಸುವುದಿಲ್ಲ, ನಗುವುದನ್ನು, ಗೆಳೆಯರನ್ನು, ವೈರಿಗಳನ್ನು, ಕುಡಿಯುವುದನ್ನು, ಸೇದುವುದನ್ನು, ವಿರಹವನ್ನು ಕಲಿಸುತ್ತದೆ ಎಂದು ಹದವಾಗಿ ಹೇಳುತ್ತದೆ, ಕಡೆಬೆಂಚಿನ ಹುಡುಗರ ದೃಷ್ಟಿಕೋನದಿಂದ. ಬದಲಾಗುತ್ತಿರುವ ಹಿಂದೀ ಸಿನೆಮಾ ಸಂಗೀತದಂತೆಯೇ ಕನ್ನಡ ಸಂಗೀತವೂ ಬದಲಾಗುತ್ತಿದೆ. ಸಂಗೀತದಂತೆ ಸಿನೆಮಾ ಸಾಹಿತ್ಯವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹೊಸಕಾಲಕ್ಕೆ ಹೊಸಹುಡುಗರು ಹೊಸ ರೀತಿಯಲ್ಲಿ ಕತೆ ಹೇಳುತ್ತಿದ್ದಾರೆ, ಹೊಸ ರೀತಿಯಲ್ಲಿ ಹಾಡುತ್ತಿದ್ದಾರೆ. ಸಿನೆಮಾದಲ್ಲಿ ಕ್ಲೀಷೆಯಾಗಿರುವ ಸೀನುಗಳನ್ನು ಧಿಕ್ಕರಿಸಿ ಸೀನುಗಳನ್ನು ಹೆಣೆಯುತ್ತಿದ್ದಾರೆ. 


(ಟ್ರೈಲರ್)

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

Friday 13 January 2017

ಮಾತುಗಳು

ಮಾತುಗಳು 
ಬಿದ್ದಿವೆ ಮೂಲೆಯಲ್ಲಿ 
ಮಡಕೆಗಳ ಒಳಗೆ 

ಮಡಕೆಗಳು 
ನಾರಿವೆ ಗವ್ವೆನುವ 
ಧೂಳು ಕುಡಿದು 

ಧೂಳುಗಳು 
ಹಾರಿವೆ ಗಾಳಿ ಬೀಸಿ 
ಮನೆ ತುಂಬ 

ಮನೆ 
ಸೋತಿದೆ ಸೋರಿ 
ಕಂಬ ಒದ್ದೆಯಾಗಿ 

ಕಂಬಗಳು 
ಟೊಳ್ಳಾಗಿವೆ ಒಳಗೆ 
ಹೊರಗೆಲ್ಲ ಗಾಯಗಳು 

ಗಾಯಗಳು 
ಬಿರಿದಿವೆ ರಕ್ತಮಾಂಸ 
ಗೆದ್ದಲು ಮುಗಿಬಿದ್ದಿವೆ 

ಗೆದ್ದಲುಗಳು 
ತಿನ್ನುತ್ತವೆ (ಒಂದು ದಿನ) ಮಡಕೆಯಲ್ಲಿ 
ಬಿದ್ದ ಮಾತುಗಳ

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

Saturday 7 January 2017

Movie: Hindi: Kapoor and Sons


Kapoor couple are together simply because they have been married for decades. Their children come to meet their granddad, one from the UK and the other from the USA, not out of love or emotions, because they have to - as a duty - karma. 

One of the Kapoor sons says, 'Happy endings are found only in fiction'. But there is no happy ending in this fiction (aka movie), just a succinct moment of respite; may be to make us feel that all families will have the calmness in between. 

The only person who is unashamed of his secret indulgences is the dying-old-Kapoor, may be because he is old and waiting to die. He is lewd and loud and unafraid of his past. If he were younger, probably he too would have behaved like his son. 

The Kapoor (son of dying-old-Kapoor) wants to hide his infidelity. The wife wants to bury the giving away of the 'story-plot' from her not-so-favourite-son to her favourite-son. The favourite son wants to conceal his homosexuality from his mother. And the not-so-favourite son wants to live in his closet without opening up to anybody. 

The movie is not about family love, trust, joy, affection or hope; it is about the pain, devastation and desolation of acceptance of the grief, disappointment, envy, resentment, betrayal and anger which perpetually occur in any family. 

Tolstoy's famous quote reads, 'All happy families are alike; each unhappy family is unhappy in its own way'. The film seems to question this cliché. No family is 'happy' or 'unhappy', Families are not black and white. Many of the secrets are buried for good, some get revealed, tormenting for life. A 'not-so-happy' family is better than not having a family after all.

'Kapoor And Sons' is streaming on Netflix.