Friday 8 July 2016

ಚೆಲುವು

ಅದೇ ತಾನೆ ಹುಟ್ಟಿದ ತಮ್ಮನಿಗೆ ಇರುವುದು
ಇಷ್ಟು ವರ್ಷವಾದರೂ ನನಗೇಕೆ ಇಲ್ಲ
ಎಂದು ಅಮ್ಮನ ಮುಂದೆ ರಂಪ ಮಾಡಿ
ಇನ್ನಿಲ್ಲದಂತೆ ಬಯ್ಯಿಸಿಕೊಂಡಾಗ
ನನಗೆ ನಾಕು ವರ್ಷ

ಪಕ್ಕದ ಮನೆ ಹುಡುಗಿಯ ಬಿಳಿ ಜೋಳದ ಬಣ್ಣವನ್ನು
ಅಮ್ಮ ಎಲ್ಲರ ಮುಂದೆ ಹೊಗಳಿ
ನನ್ನ ನಸುಗಪ್ಪಿನ ಬಣ್ಣ ಎಲ್ಲ ಅಪ್ಪನದೇ ಎಂದು
(ಅದು ನನ್ನದೇ ತಪ್ಪು ಎನ್ನುವಂತೆ)
ಎಲ್ಲರ ಮುಂದೆ ಹಂಗಿಸಿಕೊಂಡಾಗ
ನನಗಿನ್ನೂ ಹತ್ತು ವೆರ್ಷ

ನನ್ನ ಸಪಾಟ ಎದೆಯನ್ನು
ಪುಸ್ತಕದಲ್ಲೋ ದುಪ್ಪಟದಲ್ಲೋ ಮುಚ್ಚಿಕೊಂಡು
ಒಂಟಿಯಿರುವಾಗ ಎರಡು ಸೇಬು ಇಟ್ಟುಕೊಂಡು
ಕನ್ನಡಿಯ ನೋಡಿಕೊಳ್ಳುವಾಗ
ನನಗೆ ಷೋಡಸದ ಹರೆಯ

ಸ್ಲೀವ್ ಲೆಸ್ ಹಾಕಿಕೊಂಡಾಗ ಕಪ್ಪು
ಕಂಕುಳ ಕಾಣದಂತೆ ಕೈಯೆತ್ತುವುದನ್ನು
ಸೀರೆ ಉಟ್ಟುಕೊಂಡಾಗ (ಸ್ವಲ್ಪವೇ ಬಂದ) ಡೊಳ್ಳು
ಹೊಟ್ಟೆ ಕಾಣದಂತೆ ಸೆರಗು ಮುಚ್ಚಿಕೊಳ್ಳುವುದನ್ನು
ಜೀನ್ಸು ಹಾಕಿದಾಗ ಸಪಾಟು
ನಿತಂಬ ಕಾಣದಂತೆ ಉದ್ದ ಶರ್ಟು ಹಾಕುವುದನ್ನು
ಇಪ್ಪತ್ತೈದಾಗುವಷ್ಟರಲ್ಲಿ
ರೂಢಿಯಾಗಿತ್ತು

ಮಗುವಾದ ಮೇಲೆ
ಕಪ್ಪು ನಿತಂಬದ ಮೇಲೆ
ಹೆಚ್ಚಾದ ಡೊಳ್ಳುಹೊಟ್ಟೆಯ ಮೇಲೆ
ಮೂಡಿದ ಬಿಳಿ ಗೆರೆಗಳನ್ನು
ಜೋತು ಬಿದ್ದ ಮೊಲೆಗಳನ್ನು
ಕಂಡಾಗಲೆಲ್ಲ ವಾಕರಿಕೆಯಲ್ಲೇ
ನಲವತ್ತಾಗುತ್ತ ಬಂತು

ಮೀಸೆ ಗಡ್ಡಗಳನ್ನು
ಕಾಲ ಕೂದಲನ್ನು
ಮೇಲಿಂದ ಮೇಲೆ ತೆಗೆಯುತ್ತ
ಕೂದಲಿಗೆ ಬಣ್ಣ ಬಳಿದುಕೊಳ್ಳುತ್ತ
ಫೇಸಿಯಲ್ಸು ಹೇರ್ ಸ್ಟೈಲು ಮಾಡಿಸಿಕೊಳ್ಳುತ್ತ
ನನಗೆ ಐವತ್ತು ವರ್ಷ ಆಗೇ ಹೋಯ್ತು

ಐದು ವರ್ಷದ ಮೊಮ್ಮಗುವನ್ನು
ಪಕ್ಕದಲ್ಲೇ ಮಲಗಿಸಿಕೊಂಡು
ಹಾಡು ಕಲಿಸಿ ಕತೆಯ ಹೇಳಿ
ಗಟ್ಟಿಯಾಗಿ ತಬ್ಬಿಕೊಂಡು
ಚಂದದೊಂದು ಮುತ್ತನಿತ್ತು
ಗುಡ್ ನೈಟ್ ಹೇಳಿದಾಗ
‘You are the most beautiful
girl in the world’ ಎಂದಿತು
ನನಗಾಗ ಅರವತ್ತು

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)


Friday 4 March 2016

ಸಿನೆಮಾ: ಕನ್ನಡ: ಕೂರ್ಮಾವತಾರ



ಯಾವುದೇ ಸಣ್ಣ ಪಟ್ಟಣದಲ್ಲಿ, ಯಾರಿಗೂ ಅಷ್ಟೇನೂ ಪರಿಚಯವಿಲ್ಲದ (ತನ್ನ ಮನೆಯಲ್ಲೇ ಅಪರಿಚಿತನಂತೆ ಬದುಕುವ), ಯಾವುದೇ ಸರಕಾರಿ ಕಛೇರಿಯಲ್ಲಿ ಕಾರಕೂನಿಕೆ ಮಾಡಿಕೊಂಡು, ಯಾವುದೇ ಆದರ್ಶಕ್ಕಾಗಲೀ ಆಮಿಷಕ್ಕಾಗಲೀ ಒಳಗಾಗದೇ, ದಶಕಗಳಗಟ್ಟಲೇ ಅದೇ ಬದುಕನ್ನು ಬದುಕುತ್ತ, ನಿವೃತ್ತಿಯ ಹಾದಿಯಲ್ಲಿರುವ ಕೆಳಮಧ್ಯಮವರ್ಗದ ವಿಧುರ ಗುಮಾಸ್ತ, ತಲೆ-ಕೈ-ಕಾಲುಗಳನ್ನು ಒಳಗೆ ಎಳೆದುಕೊಂಡು ಚಿಪ್ಪಿನಂತೆ ಬಿದ್ದುಕೊಂಡಿರುವ ಕೂರ್ಮದಂತೆ ಬದುಕಿರುತ್ತಾನೆ. 

ನೋಡಲು ಗಾಂಧಿಯಂತೆ ಇರುವುದೇ ಮಹಾಪರಾಧವಾಯಿತೇನೋ ಎನ್ನುವಂತೆ, ಮೊದಲಿನ ಗಾಂಧಿ ಪಾತ್ರಧಾರಿ ಕೈಕೊಟ್ಟದ್ದರಿಂದ, ಟಿವಿ ಸಿರಿಯಲ್ಲಿನ ಗಾಂಧಿಯ ಪಾತ್ರ ಈತನನ್ನು ಹುಡುಕಿಕೊಂಡು ಬರುತ್ತದೆ. 

ಮೊಮ್ಮಗ ಇಂಜಿನಿಯರ್ ಆಗುವ ಕನಸಿದ್ದರೆ ಹಣ ಬೇಕು ಎಂದು ಮೊಮ್ಮಗನ ಪ್ರೀತಿಯ ದಾಳ ಎಸೆದು, ಮಗ (ಬಡ್ಡಿ-ಶೇರ್ ಮಾರುಕಟ್ಟೆ ವ್ಯವಹಾರ ಮಾಡಿ ಜೀವನ ಮಾಡುತ್ತಾನೆ) ಈ ಕೂರ್ಮನನ್ನು ಗಾಂಧಿ ಪಾತ್ರಮಾಡಲು ಒಪ್ಪಿಸುತ್ತಾನೆ. 

ಗಾಂಧಿ ಪಾತ್ರ ಮಾಡುತ್ತ ಮಾಡುತ್ತ ಈ ಕೂರ್ಮನ ತಲೆ, ಕೈ, ಕಾಲುಗಳು ಚಿಪ್ಪಿನಿಂದ ಹೊರಬರಲು ಆರಂಭಿಸುತ್ತವೆ. ಗಾಂಧಿಯ ಆದರ್ಶಗಳು ಒಳಗಿಳಿಯಲು ಹತ್ತುತ್ತವೆ. 

ಮಗ, ಮಿತ್ರರು, ನೆರೆಹೊರೆಯವರು, ಜಾಹೀರಾತುದಾರರು ಈ ಹೊಸ ಗಾಂಧಿಯ ಪ್ರಸಿಧ್ಧಿಯನ್ನು ಎನ್-ಕ್ಯಾಷ್ ಮಾಡಿಕೊಳ್ಳಲು ತೊಡಗುತ್ತಾರೆ. 

ಅದರಿಂದ ಸಿಡಿದೆದ್ದು ಹೊರಬರಲು ಸಾಕಷ್ಟು ಪ್ರಯತ್ನ ಮಾಡಿ, ಸಾಧ್ಯವಾಗದೇ ಸೋಲುತ್ತಾನೆ. 

ಗೋಡ್ಸೆಯಿಂದ ಹತ್ಯೆಯಾಗುವ ದೃಶ್ಯದಲ್ಲಿ ನಟಿಸಿ ಸಾಯುತ್ತಾನೆ. 

ನೆಹರು, ಪಟೇಲ, ಗೋಡ್ಸೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. 

ಅಟೆನ್-ಬರೋ ಅವರ `ಗಾಂಧಿ` ಸಿನೆಮಾದಂತಯೇ, ಗಾಂಧಿಯ ಹತ್ಯೆಯೊಂದಿಗೇ ಸಿನೆಮಾ ಶುರುವಾಗಿ, ಫ್ಲ್ಯಾಷ್-ಬ್ಯಾಕಿನಲ್ಲಿ ಕತೆ ಶುರು ಅಗುತ್ತದೆ, ಕಾಸರವಳ್ಳಿಯವರ `ಕೂರ್ಮಾವತಾರ`. ಆದರೆ `ಗಾಂಧಿ` ಸಿನೆಮಾದಲ್ಲಿ, ನಿಜಜೀವನದಲ್ಲಿ ಗಾಂಧಿಯ ಹತ್ಯೆ ಆಗಿದ್ದು ಒಂದೇ ಗುಂಡಿನಿಂದ. ಇಲ್ಲಿ ದೃಶ್ಯ ಸರಿಯಾಗಿ ಮೂಡಿಬಂದಿಲ್ಲವೆಂದು, ಗಾಂಧಿಯನ್ನು ಪದೇ ಪದೇ ಕೊಲ್ಲಲಾಗುತ್ತದೆ. 

ವೈಯಕ್ತಿಕ ಆದರ್ಶಗಳ, ಕುಟುಂಬದ, ಮಾಧ್ಯಮಗಳ, ಜಾತಿ-ಧರ್ಮಗಳ, ಸಮಾಜದ ಪದರು ಪದರುಗಳನ್ನು ಅದೇ ಸಂಕೀರ್ಣತೆಯಲ್ಲಿ ಉಣಬಡಿಸುತ್ತಾರೆ. 

ನೋಡಲೇಬೇಕಾದ ಚಿತ್ರ.

('ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)

Friday 5 February 2016

ಉನ್ಮತ್ತೆ

ಅದುಮಿಡುವುದು 
ಒಂಥರದ 

ಅಗತ್ಯ? ನಾನರೆ 
ಹಣ್ಣಾದ ಹಣ್ಣು 

ನೀ ಹುಲಿ 
ನಿನ್ನುಗುರು ನೀನೇ ಕಚ್ಚುತ್ತ 

ನಾವ್ಮದುವೆಯಾದ ದಿನ 
ಮರಗಳದುರಿದವು, ಅವಕೆ 

ಮೈಮೇಲೆ ದೆವ್ವ ಬಂದಂತೆ - 
ದಯೆಯಿರಲೆನ್ನ ಮೇಲೆ, ಎಂದೆ ನೀ.

(ಮೂಲ: 'Frenzied': ೨೦೧೫ನೇ ಸಾಲಿನ ಟಿ ಎಸ್ ಏಲಿಯಟ್ ಪ್ರಶಸ್ತಿ ಪಡೆದ ಸಾರಾ ಹೋವ್ ಬರೆದ ಕವಿತೆ) 

(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)