ನೋಡಲು ಗಾಂಧಿಯಂತೆ ಇರುವುದೇ ಮಹಾಪರಾಧವಾಯಿತೇನೋ ಎನ್ನುವಂತೆ, ಮೊದಲಿನ ಗಾಂಧಿ ಪಾತ್ರಧಾರಿ ಕೈಕೊಟ್ಟದ್ದರಿಂದ, ಟಿವಿ ಸಿರಿಯಲ್ಲಿನ ಗಾಂಧಿಯ ಪಾತ್ರ ಈತನನ್ನು ಹುಡುಕಿಕೊಂಡು ಬರುತ್ತದೆ.
ಮೊಮ್ಮಗ ಇಂಜಿನಿಯರ್ ಆಗುವ ಕನಸಿದ್ದರೆ ಹಣ ಬೇಕು ಎಂದು ಮೊಮ್ಮಗನ ಪ್ರೀತಿಯ ದಾಳ ಎಸೆದು, ಮಗ (ಬಡ್ಡಿ-ಶೇರ್ ಮಾರುಕಟ್ಟೆ ವ್ಯವಹಾರ ಮಾಡಿ ಜೀವನ ಮಾಡುತ್ತಾನೆ) ಈ ಕೂರ್ಮನನ್ನು ಗಾಂಧಿ ಪಾತ್ರಮಾಡಲು ಒಪ್ಪಿಸುತ್ತಾನೆ.
ಗಾಂಧಿ ಪಾತ್ರ ಮಾಡುತ್ತ ಮಾಡುತ್ತ ಈ ಕೂರ್ಮನ ತಲೆ, ಕೈ, ಕಾಲುಗಳು ಚಿಪ್ಪಿನಿಂದ ಹೊರಬರಲು ಆರಂಭಿಸುತ್ತವೆ. ಗಾಂಧಿಯ ಆದರ್ಶಗಳು ಒಳಗಿಳಿಯಲು ಹತ್ತುತ್ತವೆ.
ಮಗ, ಮಿತ್ರರು, ನೆರೆಹೊರೆಯವರು, ಜಾಹೀರಾತುದಾರರು ಈ ಹೊಸ ಗಾಂಧಿಯ ಪ್ರಸಿಧ್ಧಿಯನ್ನು ಎನ್-ಕ್ಯಾಷ್ ಮಾಡಿಕೊಳ್ಳಲು ತೊಡಗುತ್ತಾರೆ.
ಅದರಿಂದ ಸಿಡಿದೆದ್ದು ಹೊರಬರಲು ಸಾಕಷ್ಟು ಪ್ರಯತ್ನ ಮಾಡಿ, ಸಾಧ್ಯವಾಗದೇ ಸೋಲುತ್ತಾನೆ.
ಗೋಡ್ಸೆಯಿಂದ ಹತ್ಯೆಯಾಗುವ ದೃಶ್ಯದಲ್ಲಿ ನಟಿಸಿ ಸಾಯುತ್ತಾನೆ.
ನೆಹರು, ಪಟೇಲ, ಗೋಡ್ಸೆ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ.
ಅಟೆನ್-ಬರೋ ಅವರ `ಗಾಂಧಿ` ಸಿನೆಮಾದಂತಯೇ, ಗಾಂಧಿಯ ಹತ್ಯೆಯೊಂದಿಗೇ ಸಿನೆಮಾ ಶುರುವಾಗಿ, ಫ್ಲ್ಯಾಷ್-ಬ್ಯಾಕಿನಲ್ಲಿ ಕತೆ ಶುರು ಅಗುತ್ತದೆ, ಕಾಸರವಳ್ಳಿಯವರ `ಕೂರ್ಮಾವತಾರ`. ಆದರೆ `ಗಾಂಧಿ` ಸಿನೆಮಾದಲ್ಲಿ, ನಿಜಜೀವನದಲ್ಲಿ ಗಾಂಧಿಯ ಹತ್ಯೆ ಆಗಿದ್ದು ಒಂದೇ ಗುಂಡಿನಿಂದ. ಇಲ್ಲಿ ದೃಶ್ಯ ಸರಿಯಾಗಿ ಮೂಡಿಬಂದಿಲ್ಲವೆಂದು, ಗಾಂಧಿಯನ್ನು ಪದೇ ಪದೇ ಕೊಲ್ಲಲಾಗುತ್ತದೆ.
ವೈಯಕ್ತಿಕ ಆದರ್ಶಗಳ, ಕುಟುಂಬದ, ಮಾಧ್ಯಮಗಳ, ಜಾತಿ-ಧರ್ಮಗಳ, ಸಮಾಜದ ಪದರು ಪದರುಗಳನ್ನು ಅದೇ ಸಂಕೀರ್ಣತೆಯಲ್ಲಿ ಉಣಬಡಿಸುತ್ತಾರೆ.
ನೋಡಲೇಬೇಕಾದ ಚಿತ್ರ.
('ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)