Monday, 2 March 2026

ಇಂದು ರಾತ್ರಿ ನಿನಗೊಂದು ಕವಿತೆ ಬರೆಯಬೇಕೆಂದಿದ್ದೆ

 ಇಂದು ರಾತ್ರಿ ನಿನಗೊಂದು ಕವಿತೆ ಬರೆಯಬೇಕೆಂದಿದ್ದೆ 

ಆದರೆ ಈ ಊರು ಅಡ್ಡ ಬರುತ್ತಿದೆ


ನಾಳೆ ಎಂಬುದೇ ಸುಳ್ಳು ಎಂಬಂತೆ 

ದಾರಿಗಳು ತೆರೆಯುತ್ತಲೇ ಇದ್ದವು

ಒಂದೇ ದಿನ ಬದುಕುವ ಜೀವಿಗಳಂತೆ 

ನಾವು ಅಲೆದಾಡಿದೆವು 


ಹಾಗಾಗಿ ಆ ಕವಿತೆ 

ಆ ನಡಿಗೆಯಾಯಿತು 

ನಗುವಾಯಿತು 

ರಸ್ತೆ ದಾಟುವ ನಡುವಿನ 

ಮೌನದ ಕ್ಷಣಗಳಾಯಿತು 


ಬಹುಶಃ ಇದೇ ನಿಜವಾದ ಕವಿತೆ 

ಪ್ರತಿಕ್ಷಣವನ್ನೂ ಜೀವಿಸಿದ ಮೇಲೆ

ಬರೆಯಲು ಉಳಿಯುವುದಾದ್ರೂ ಏನು?

Monday, 23 February 2026

ಬದುಕಿಗಿಂತ ಕಠಿಣ ಶಿಕ್ಷೆಯೇ ಇಲ್ಲ

 ಬದುಕಿಗಿಂತ ಕಠಿಣ  ಶಿಕ್ಷೆಯೇ ಇಲ್ಲ

ಇನ್ನಾವ ಅಪರಾಧವೂ ಉಳಿಯಲೇ ಇಲ್ಲ


ಚೂರುಚೂರಾಗಿ ಹಂಚಿ ಹೋಗಿರುವೆನು

ನನ್ನ ಪಾಲಿಗೆ ಒಂಚೂರೂ ಇರಲೇ ಇಲ್ಲ


ಜೀವವೇ, ಮರಣವೇ ನಿನ್ನ ಗುರಿ

ಬೇರೆ ಯಾವ ದಾರಿಯೂ ಕಾಣಲೇ ಇಲ್ಲ


ಚೂರು ಹೆಚ್ಚು ಕಡಿಮೆಯಾದರದು ಸತ್ಯವೇ ಅಲ್ಲ

ಸುಳ್ಳಿಗೆ ಮಿತಿಯೆಂಬುದು ಅಳಿಯಲೇ ಇಲ್ಲ


ಜೀವವೇ, ಈಗ ಹೇಳು, ಎಲ್ಲಿಗೆ ಹೋಗೋಣ

ಸಂತೆಯಲ್ಲಿ ವಿಷ ಕೂಡ ಸಿಗಲೇ ಇಲ್ಲ


ಎಂಥ ಅವತಾರ, ಎಂಥ ಪೈಗಂಬರ

ಅನಿಸುತಿದೆ ದೇವರೇ ಇರಲೇ ಇಲ್ಲ 


ಚಿನ್ನದ ಚೌಕಟ್ಟನು ಹಾಕಿದರೆ ಏನು 

ಕನ್ನಡಿಗೆ ಸುಳ್ಳು ಹೇಳಲು ಬರಲೇ ಇಲ್ಲ


ತನ್ನ ಪದಗಳೊಳಗೆ ತಾನು ಜೀವಂತ

‘ನೂರ್’ ಈ ಲೋಕದಿಂದ ಹೋಗಲೇ ಇಲ್ಲ


(ಕೃಷ್ಣ ಬಿಹಾರಿ ನೂರ್ ಅವರ ज़िंदगी से बड़ी सज़ा ही नहीं ಗಜಲಿನ ಕನ್ನಡ ಭಾವಾನುವಾದ)

Monday, 5 January 2026

ಲಂಡನ್ನಿನ ಎಮ್‌ಟಿಆರ್

 ಲಂಡನ್ನಿನ ಎಮ್‌ಟಿಆರ್-ನಲ್ಲಿ ಫಿಲ್ಟರ್ ಕಾಫಿಯ ಘಮದ ಜೊತೆ ಇಡ್ಲಿ ದೋಸೆಗಳ ಹಬೆ ಏರುತ್ತಿತ್ತು. ಮೆನು ಬೋರ್ಡ್‌ನಲ್ಲಿ,ಇಂದಿನ ವಿಶೇಷ ತಿಂಡಿಗಳನ್ನು ಬರೆದಿದ್ದರು, ಇಂಗ್ಲೀಷಿನಲ್ಲಿ. ಅದರ ಕೆಳಗೆ ಕನ್ನಡದಲ್ಲಿ! ಮುದ್ರಿತವಲ್ಲ. ಕೈಯಾರೆ ಬರೆದದ್ದು. ಅದೂ ಸುಂದರೆ ಲಿಪಿಯಲ್ಲಿ. ಯಾರು ಬರೆದದ್ದು? ಗಲ್ಲೆಯಲ್ಲಿ ನಿಂತ ಮ್ಯಾನೇಜರ್ ತಾನೇ ಎಂದಳು. ಕನ್ನಡತಿಯಾ ಎಂದೆ. ಇಲ್ಲ, ಗುಜರಾತಿ ಎಂದಳು. ಒಂದು ಕ್ಷಣ, ಒಂದು ಸಣ್ಣ ಆನಂದ ಯಾವುದೇ ಮುನ್ಸೂಚನೆ ಇಲ್ಲದೆ ಅರಳಿತು, ಗೊತ್ತು ಪರಿಚಯವಿಲ್ಲದ ದೇಶದಲ್ಲಿ ಕುರ್ಚಿಯನ್ನು ಎಳೆದು ಯಾರೋ ತಲೆ ಎತ್ತಿ  ನೋಡದೆಯೇ, "ಇಲ್ಲಿ, ಕುಳಿತುಕೋ" ಎಂದು ಅಚ್ಚ ಕನ್ನಡದಲ್ಲಿ ಹೇಳಿದಂತೆ ಅನಿಸಿತು.